ಕೋಟ: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಉತ್ಪನ್ನಗಳ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್ಕಾಮ್ಸ್) ಮಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಸೀತಾರಾಮ್ ಗಾಣಿಗ ಹಾಲಾಡಿ ಅವರನ್ನು ಕೋಟ ಗಾಣಿಗ ಯುವ ಸಂಘಟನೆ ಸನ್ಮಾನಿಸಿದೆ. ಮಹಿಳಾ ಸಂಘಟನೆ ಸಹಕಾರದ ಈ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವದಂದು ಹಾಲಾಡಿಯಲ್ಲಿ ನಡೆಯಿತು.
ಉಡುಪಿ ಜಿಲ್ಲೆಗೆ ಹಾಪ್ಕಾಮ್ಸ್ ಅಧ್ಯಕ್ಷ ಸ್ಥಾನ ಪ್ರಥಮ ಬಾರಿಗೆ ಲಭಿಸಿದ್ದು ಜಿಲ್ಲೆಗೆ ಸಂದ ಗೌರವ ಹಾಗೂ ಅವಿಭಜಿತ ದ.ಕ. ಜಿಲ್ಲೆಯಲ್ಲೇ ಪ್ರಪಥಮ ಬಾರಿಗೆ ಗಾಣಿಗ ಸಮಾಜದ ಓರ್ವರು ಇದರ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಮಾಜಕ್ಕೆ ಅತ್ಯಂತ ಸಂತಸ ತಂದ ವಿಷಯ ಎಂದು ಸಂಘಟನೆ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ಬಾಂಧವರು ಸಾಧನೆಗೈದಾಗ ನಮ್ಮ ಸಂಘದ ವತಿಯಿಂದ ಗುರುತಿಸಿ ಗೌರವಿಸುವ ಕ್ರಮ ಬೆಳೆಸಿಕೊಂಡು ಬಂದಿದ್ದೇವೆ. ನಿಮ್ಮ ಆಡಳಿತಾವಧಿಯಲ್ಲಿ ಸಂಸ್ಥೆಯಲ್ಲಿ ಅತ್ಯುತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಹಾಪ್ಕಾಮ್ಸ್ ಮಳಿಗೆಗಳನ್ನು ತೆರೆಯಲು ಒತ್ತು ನೀಡುವುದರ ಮೂಲಕ ಸಂಸ್ಥೆಯ ಬಲವರ್ಧನೆಗೆ ಆದ್ಯತೆ ನೀಡಲಾಗುವುದು ಹಾಗೂ ಗಾಣಿಗ ಸಮಾಜದ ಸಂಘಟನೆಗೂ ಸಹಕರಿಸುವುದಾಗಿ ಸನ್ಮಾನಿತ ಸೀತಾರಾಮ್ ಗಾಣಿಗರು ಭರವಸೆ ನೀಡಿದರು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘಟನೆ ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ, ಜಿಲ್ಲಾ ಸಂಘದ ಆಡಳಿತ ಮಂಡಳಿ ಸದಸ್ಯ ಶೇವಧಿ ಸುರೇಶ್ ಗಾಣಿಗ ಕೋಟ, ಮಹಿಳಾ ಸಂಘಟನೆಯ ಅಧ್ಯಕ್ಷೆ ಅನಿತಾ ಶ್ರೀಧರ್ ಗಾಣಿಗ, ಗಾಣಿಗ ಯುವ ಸಂಘಟನೆ ಕೋಟ ಘಟಕದ ಕಾರ್ಯದರ್ಶಿ ಗಣೇಶ್ ಗಾಣಿಗ ಚಿತ್ರಪಾಡಿ, ಖಜಾಂಚಿ ಗಿರೀಶ್ ಗಾಣಿಗ ಬೆಟ್ಲಕ್ಕಿ, ಸಂಸ್ಥೆಯ ಮಾಜಿ ಅಧ್ಯಕ್ಷ ರಾಜೇಶ್ ಗಾಣಿಗ ಉಪಸ್ಥಿತರಿದ್ದರು.