ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಸ್ಪೆಷಲ್ ಡೆಪ್ಯುಟಿ ಕಮಿಷನರ್-3 (ಉತ್ತರ) ಆಗಿ ಡಾ. ವಾಸಂತಿ ಅಮರ್ ಅವರನ್ನು ರಾಜ್ಯ ಸರ್ಕಾರವು ನೇಮಕ ಮಾಡಿದೆ. ಈ ಮೂಲಕ ಗಾಣಿಗ ಸಮುದಾಯದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಡಾ. ವಾಸಂತಿ ಅಮರ್ ಅವರಿಗೆ ಮತ್ತೊಮ್ಮೆ ಮಹತ್ವದ ಸ್ಥಾನ ಲಭಿಸಿದೆ.
ಕರ್ನಾಟಕ ರಾಜ್ಯ ಖನಿಜ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ ಆಗಿದ್ದ ಇವರನ್ನು ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಉಪ ಆಯುಕ್ತರಾಗಿ ನೇಮಕಗೊಳಿಸಿ ಅ. 30ರಂದು ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಗಾಣಿಗ ಮಹಾಸಭಾ ಅಧ್ಯಕ್ಷ ಚಂದ್ರಶೇಖರ್, ಲೆಕ್ಕಪರಿಶೋಧಕ ನವೀನ್ ಶೆಟ್ಟಿ, ಪದಾಧಿಕಾರಿಗಳಾದ ದೇವರಾಜ್, ಶ್ರೀನಿವಾಸ್ ಮತ್ತಿತರರು ಡಾ. ವಾಸಂತಿ ಅವರನ್ನು ಅವರ ಸ್ವಗೃಹದಲ್ಲಿ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದರು..
ಗಾಣಿಗ ಸಮಾಜದ ಮೊದಲ ಐಎಎಸ್ ಅಧಿಕಾರಿ
ಡಾ. ವಾಸಂತಿ ಅಮರ್ ಅವರನ್ನು ಐಎಎಸ್ ಅಧಿಕಾರಿಯಾದ ಗಾಣಿಗ ಸಮಾಜದ ಪ್ರಪ್ರಥಮ ಮಹಿಳೆ ಎನ್ನಬಹುದು. ಇವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನವರು. ಇಲ್ಲಿನ ಕುಗ್ರಾಮವೊಂದರಲ್ಲಿ ಜನಿಸಿದ ಇವರು ಬಡತನದಲ್ಲೇ ಬೆಳೆದರು. ತಂದೆ-ತಾಯಿ ಶಿಕ್ಷಕರಾಗಿದ್ದ ಕಾರಣ ಶಿಕ್ಷಣದ ಮಹತ್ವವನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡು ವಿದ್ಯಾವಂತರಾಗಿ ವೈದ್ಯಕೀಯ ವೃತ್ತಿ ಆರಿಸಿಕೊಂಡರು.
ಮದುವೆಯಾದ ನಂತರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಪರೀಕ್ಷೆ ಬರೆದು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಹಾಯಕ ನಿರೀಕ್ಷಕಿಯಾಗಿ ಸೇವೆ ಆರಂಭಿಸಿದರು. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಆಯುಕ್ತೆ, ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತೆ, ತದನಂತರ ಬಿಡಿಎ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಿದ್ದರು. ಈಗ ಬೆಂಗಳೂರು ನಗರ ಜಿಲ್ಲೆ ಸ್ಪೆಷಲ್ ಡೆಪ್ಯುಟಿ ಕಮಿಷನರ್-3 (ಉತ್ತರ) ಆಗಿ ನೇಮಕಗೊಳ್ಳುವ ಮೊದಲು ಕರ್ನಾಟಕ ರಾಜ್ಯ ಖನಿಜ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ ಆಗಿ ಕಾರ್ಯನಿರ್ವಹಿಸದ್ದರು.
ಮಹಿಳಾ ಐಎಎಸ್ ಅಧಿಕಾರಿಯಾಗಿ ಮಹತ್ವದ ಸ್ಥಾನದಲ್ಲಿ ಉನ್ನತ ಜವಾಬ್ದಾರಿ ವಹಿಸಿಕೊಂಡಿರುವ ಹಾಗೂ ಈ ಮೂಲಕ ಸಮಾಜದ ಯುವಪೀಳಿಗೆಗೆ ಮಾದರಿ ಮತ್ತು ಪ್ರೇರಣೆಯೂ ಆಗಿರುವ ಡಾ.ವಾಸಂತಿ ಅಮರ್ ಅವರಿಗೆ ಗ್ಲೋಬಲ್ ಗಾಣಿಗ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸುತ್ತಿದೆ.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರ ಜನ್ಮದಿನಾಚರಣೆಯಲ್ಲಿ ಗಾಣಿಗ ಯುವ ಬಳಗದ ಸಂಭ್ರಮ
ಸಂಬಂಧಿತ ಸುದ್ದಿ: ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ