ಬೆಂಗಳೂರು: ಶಿಕ್ಷಕ, ಕವಿ ಸಂಗಮನಾಥ ಪಿ. ಸಜ್ಜನ ಅವರು ರಚಿಸಿರುವ ʼಅಕ್ಷರ ವೈಭವʼ ಕವನ ಸಂಕಲನವು ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಕೇತಕಿ ಸಂಗಮೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ಕಲಬುರಗಿಯ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಿಡುಗಡೆಗೊಂಡಿತು.
ಇದು ನನ್ನ ಜೀವನದ ಅತಿದೊಡ್ಡ ಸಂಭ್ರಮದ ದಿನ, ಈ ದಿನವನ್ನು ನಾನು ಸದಾ ನೆನಪಿಟ್ಟುಕೊಳ್ಳಬೇಕಾಗಿದೆ, ಇದಕ್ಕೆ ಸಹಕರಿಸಿದ ಶಾಲೆ, ಶಿಕ್ಷಕರ ಬಳಗ, ಕುಟುಂಬ ವರ್ಗ, ಸ್ನೇಹಿತರ ಬಳಗವನ್ನು ಜೀವನದುದ್ದಕ್ಕೂ ಮರೆಯಲಾರೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಗಮನಾಥ ಅವರು, ಕನ್ನಡ ಕಲಿಯಿರಿ, ಕಲಿಸಿರಿ, ಉಳಿಸಿರಿ, ಬೆಳೆಸಿರಿ ಎಂದು ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅವರು ಸಮಾರಂಭವನ್ನು ಉದ್ಘಾಟಿಸಿದ್ದು, ಕನ್ನಡ ಸಾಹಿತ್ಯ ಪ್ರಾರಂಭದಿಂದಲೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತ ಬಂದಿದೆ. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ತಿದ್ದುವ ಕೆಲಸವನ್ನು ಸಾಹಿತ್ಯ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಿದೆ ಎಂದು ಹೇಳಿದರು.
ಸಂಬಂಧಿತ ಸುದ್ದಿ: ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ ಇವರಿಗಿದೆ!; ಯಾರಿವರು?
ಮುಖ್ಯ ಅತಿಥಿ ಆಗಿ ಆಗಮಿಸಿದ್ದ ಡಾ.ಟಿ.ಭಾಗ್ಯಮ್ಮ, ಪುಸ್ತಕದ ಮುನ್ನುಡಿ-ಬೆನ್ನುಡಿಗೆ ಪ್ರಸಿದ್ಧ ಕವಿ-ಸಾಹಿತಿಗಳ ಮೊರೆ ಹೋಗುವ ಈ ಸಂದರ್ಭದಲ್ಲಿ ಸಂಗಮನಾಥ ಅವರು ತನ್ನ ತಾಯಿಯಿಂದಲೇ ಬೆನ್ನುಡಿ ಬರೆಸಿಕೊಂಡಿದ್ದಾರೆ. ಒಬ್ಬ ತಾಯಿ ತನ್ನ ಮಗನನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಮೊದಲ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ವಿಶ್ಲೇಷಿಸಿದರು.
ಮತ್ತೊಬ್ಬರು ಮುಖ್ಯಅತಿಥಿ ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರು, ಸ್ವಾಗತ ಭಾಷಣ ಮಾಡಿ ವಿನೂತನ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಪ್ರಸಿದ್ಧಿ ಪಡೆದಿದೆ ಎಂದರು.
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರು, ಪತ್ರಕರ್ತ, ಶಿಕ್ಷಕ, ಲೇಖಕ ಸಮಾಜದ ನಿಜವಾದ ರಕ್ಷಕರು. ಅಕ್ಷರ ವೈಭವ ಕವನ ಸಂಕಲನವು ಸಮಾಜದಲ್ಲಿನ ಮೌಲ್ಯಗಳನ್ನು ಬಿತ್ತುವ ಮೂಲಕ ಪ್ರೀತಿ-ವಿಶ್ವಾಸಗಳ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಲಿ, ಅವರ ಸಾಹಿತ್ಯ ಕೃಷಿಯಲ್ಲಿ ಇನ್ನಷ್ಟು ಕೃತಿಗಳು ಹೊರಹೊಮ್ಮಲಿ ಎಂದು ಹಾರೈಸಿದರು.
ಶ್ರೀ ಕೇತಕಿ ಸಂಗಮೇಶ್ವರ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸಜ್ಜನ, ಕಲಬುರಗಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮೋನಪ್ಪ ಬಡಿಗೇರ ಮತ್ತಿತರರು ವೇದಿಕೆಯಲ್ಲಿದ್ದರು. ಉದಯೋನ್ಮುಖ ಕವಿ ಸಂಗಮನಾಥ ಪಿ. ಸಜ್ಜನ ಅವರಿಗೆ ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣರಾಜ ಛಪ್ಪರಬಂದಿ, ಜಗದೀಶ ಮರಪಳ್ಳಿ, ರವೀಂದ್ರ ಭಂಟನಳ್ಳಿ, ಸಿದ್ದಣ್ಣ ಸಜ್ಜನ, ಪ್ರಭಾವ ಪಟ್ಟಣಕರ್, ವಿಶ್ವನಾಥ ತೊಟ್ನಳ್ಳಿ, ನಾಗರಾಜ ಸಜ್ಜನ ಭೀಮನಹಳ್ಳಿ, ಶರಣಬಸಪ್ಪ ನರೂಣಿ, ರಾಜೇಂದ್ರ ಮಾಡಬೊಳ, ಸಂತೋಷ ಸಜ್ಜನ ಎಇಇ, ಬಸವರಾಜ ಸಜ್ಜನ ಸುಲೇಪೇಟ, ಶರಣಬಸಪ್ಪ ಜಿಂಗಿನಮಠ, ರವಿಕುಮಾರ ಶಹಾಪೂರಕರ, ಮಾಲಾ ದಣ್ಣೂರ, ಶಿವಶರಣಪ್ಪ ಹಡಪದ, ಬಸವಂತರಾಯ ಕೋಳಕೂರ, ರಹೆಮಾನ್ ಪಟೇಲ್, ಧರ್ಮಣ್ಣ ಧನ್ನಿ, ಹಣಮಂತ ಕಲಶೆಟ್ಟಿ, ಮಲ್ಲು ಹರವಾಳ ಮಹೇಶ ತೆಗ್ಗಳ್ಳಿ, ಶಿವಶರಣಪ್ಪ ಪೂಜಾರಿ, ಮಲ್ಲು ಸಜ್ಜನ ಮೇದಕ್ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಶಿವರಾಜ ಅಂಡಗಿ ನಿರೂಪಣೆ ಮಾಡಿದ್ದು, ಕವಿತಾ ಕವಳೆ ಪ್ರಾರ್ಥನೆ ಗೀತೆ ಹಾಡಿದರು. ಮಲ್ಲಿಕಾರ್ಜುನ ಇಬ್ರಾಹಿಂಪುರ ವಂದನಾರ್ಪಣೆ ಸಲ್ಲಿಸಿದರು.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಕರ್ನಾಟಕ ಚುನಾವಣೆ: ಕಣದಲ್ಲಿರುವ ಗಾಣಿಗ ಅಭ್ಯರ್ಥಿಗಳ ವಿವರ ಇಲ್ಲಿದೆ..
ಸಂಬಂಧಿತ ಸುದ್ದಿ: ಶಿವರಾಜಕುಮಾರ್ ಅವರಿಂದ ನಾಗೇಂದ್ರ ಗಾಣಿಗ ನಿರ್ದೇಶನದ ‘ಅಭಿರಾಮಚಂದ್ರ’ ಸಿನಿಮಾ ಟೀಸರ್ ಬಿಡುಗಡೆ