ಬೆಂಗಳೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಆ ದಿನಕ್ಕಾಗಿ ದೇಶದ ಅಸಂಖ್ಯಾತ ಭಕ್ತರು ಉತ್ಸುಕತೆಯಿಂದ ಕಾಯುತ್ತಿದ್ದಾರೆ.
ಅಂದು ದೇಶಾದ್ಯಂತ ಹಬ್ಬದ ವಾತಾವರಣ ಇರಲಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ಅದೇ ರೀತಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಚಿತ್ರಗಿಯ ಶ್ರೀರಾಮಚಂದ್ರ ದೇವರು ಮಠದಲ್ಲಿಯೂ ವಿಶೇಷ ಪೂಜೆ ಜರುಗಲಿದೆ.
ಅಯೋಧ್ಯೆಯಲ್ಲಿ ಜ. 22ರಂದು ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲೇ ಚಿತ್ರಗಿ ಮಠದ ಶ್ರೀ ರಾಮಚಂದ್ರ ದೇವಸ್ಥಾನದ ಭಕ್ತರೆಲ್ಲ ಸೇರಿ ವೇದಮೂರ್ತಿ ವಿನಾಯಕ ಜೋಶಿ ಅವರ ನೇತೃತ್ವದಲ್ಲಿ 1008 ಶ್ರೀ ರಾಮ ತಾರಕ ಮಂತ್ರ ಹವನ ನಡೆಸಲಿದ್ದಾರೆ.
ಅಲ್ಲದೆ ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನಾ ಸಮಯವಾದ ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ಸರಿಯಾಗಿ ಶಂಖನಾದದೊಂದಿಗೆ ಮಹಾಮಂಗಳಾರತಿ ನಡೆಸಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಈ ಪೂಜಾ ಕಾರ್ಯಕ್ರಮದ ಬಳಿಕ ಪ್ರಸಾದ ಭೋಜನ ವ್ಯವಸ್ಥೆ ಕೂಡ ಇರಲಿದೆ.
ನಂತರ ಸಂಧ್ಯಾ ಸಮಯದಲ್ಲಿ ಹಣತೆಯಲ್ಲಿ ದೀಪಗಳನ್ನು ಹಚ್ಚುವುದು ಹಾಗೂ ಭಜನಾ ಕಾರ್ಯಕ್ರಮ ಕೂಡ ಇರಲಿದ್ದು, ಭಕ್ತರು ಇದರಲ್ಲಿಯೂ ಭಾಗವಹಿಸಬೇಕಾಗಿ ವಿನಂತಿ ಮಾಡಿಕೊಳ್ಳಲಾಗಿದೆ. ಈ ವಿಶೇಷ ಪೂಜೆ ಪ್ರಯುಕ್ತ ಭಕ್ತರು ಸೇವಾರ್ಥವಾಗಿ ದೀಪದ ಎಣ್ಣೆ ಹಾಗೂ ದೇಣಿಗೆ ನೀಡಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಸಂಬಂಧಿತ ಸುದ್ದಿ: ಶ್ರೀವೇಣುಗೋಪಾಲಕಷ್ಣ ಸನ್ನಿಧಿಯಲ್ಲಿ ಅದ್ಧೂರಿ ದೀಪೋತ್ಸವ; ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ
ಸಂಬಂಧಿತ ಸುದ್ದಿ: ಪುರಾತನ ಚಿತ್ರಗಿ ಶ್ರೀ ರಾಮಚಂದ್ರ ಮಠದಲ್ಲಿ ಶನಿವಾರ ದೀಪೋತ್ಸವ
ಸಂಬಂಧಿತ ಸುದ್ದಿ: ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ