ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ತನ್ನ ಎಸ್ಜಿಇಸಿಟಿ ಅಕಾಡೆಮಿ ಮೂಲಕ ತ್ರಿಶೂಲ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣ” ಎಂಬ ವಿಚಾರಸಂಕಿರಣ ಜ.13ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಯಿತು.
ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಎಸ್ಜಿಇಸಿಟಿ ಕಚೇರಿಯಲ್ಲಿ ಜ.13ರ ಶನಿವಾರ ಬೆಳಗ್ಗೆ 11ಕ್ಕೆ ಮ್ಯಾನೇಜಿಂಗ್ ಟ್ರಸ್ಟೀ ಬಿ.ಕೆ.ಬಸವರಾಜ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಆರೋಗ್ಯ: ಸಮಸ್ಯೆ ಮತ್ತು ಪರಿಹಾರಗಳು” ಎಂಬ ವಿಷಯವಾಗಿ ವಿಚಾರಸಂಕಿರಣ ನಡೆಯಿತು.
ಉದ್ಘಾಟನಾ ಭಾಷಣ ಮಾಡಿದ ಬಿ.ಕೆ.ಬಸವರಾಜ್, ಮಹಿಳೆಯರು ಕೌಶಲಾಭಿವೃದ್ಧಿ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗುವ ಮೂಲಕ ಆರ್ಥಿಕವಾಗಿಯೂ ಸಬಲರಾಗಬೇಕು ಎಂದು ಹೇಳಿದರು.
ಮಹಿಳೆಯರ ಸಮಸ್ಯೆಗಳು, ಸ್ತ್ರೀಯರ ಆರೋಗ್ಯ ಸಮಸ್ಯೆ ಮತ್ತು ಅವುಗಳ ಪರಿಹಾರಗಳ ಕುರಿತು ತ್ರಿಶೂಲ ಟ್ರಸ್ಟ್ ಕಾರ್ಯದರ್ಶಿ ಶುಭಾ ಬಸವರಾಜ್ ಮಾತನಾಡಿದರು. ಅಲ್ಲದೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲೇ ಪರಿಹರಿಸಿಕೊಳ್ಳುವ ಬಗ್ಗೆಯೂ ಮಾಹಿತಿ ನೀಡಿದರು.
ದೇವನಹಳ್ಳಿ ಪುರಸಭೆ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಟೈಲರಿಂಗ್, ಬ್ಯೂಟಿಷಿಯನ್, ಕಂಪ್ಯೂಟರ್ ತರಬೇತಿಗಳನ್ನು ಪಡೆದು ಹೇಗೆ ಸ್ವ-ಉದ್ಯೋಗ ಕಂಡುಕೊಂಡು ಜೀವನೋಪಾಯ ಮಾಡಿಕೊಳ್ಳಬಹುದು ಎನ್ನುವ ಕುರಿತು ಕಿವಿಮಾತು ಹೇಳಿದರು. ಅಲ್ಲದೆ ಸಂಸ್ಥೆಗೆ ಏಳು ಹೊಲಿಗೆಯಂತ್ರಗಳನ್ನು ದಾನವಾಗಿ ನೀಡಿದರು. ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ 15 ಮಂದಿಗೆ ಪ್ರಮಾಣಪತ್ರ ವಿತರಿಸಿದರು.
ಇದೇ ವೇಳೆ ಮಹಿಳೆಯರಿಗೆ ಮೆನ್ಸ್ಟ್ರುವಲ್ ಕಪ್ ವಿತರಣೆ ಕೂಡ ಮಾಡಲಾಯಿತು. ತ್ರಿಶೂಲ ಟ್ರಸ್ಟ್ ಅಧ್ಯಕ್ಷ ಬಿ.ಸಿ.ರಾಜಶೇಖರ್, ಕಾರ್ಯದರ್ಶಿ ಶುಭಾ ಬಸವರಾಜ್, ಎಸ್ಜಿಇಸಿಟಿ ಸಂಸ್ಥಾಪಕ ಟ್ರಸ್ಟೀ ಆರ್.ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ
ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ
ಸಂಬಂಧಿತ ಸುದ್ದಿ: ರಾಯಚೂರಿನಲ್ಲಿ ಜ. 21ರಂದು ಗಾಣಿಗರ ವಧು-ವರರ ರಾಜ್ಯಮಟ್ಟದ ಸಮಾವೇಶ