Thursday, May 2, 2024
spot_img
More

    Latest Posts

    ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ಬೆಂಗಳೂರು: ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಉಡುಪಿಯಲ್ಲಿ ನ.1ರಂದು ನಡೆದ ರಾಜ್ಯೋತ್ಸವ ಸಂದರ್ಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ಯಾರಿವರು?: ಇವರು ಉಡುಪಿ ಜಿಲ್ಲೆ ಕುಂದಾಪುರದ ಆಜ್ರಿಯ ಮಂಜಯ್ಯ ಗಾಣಿಗ-ಮುತ್ತಯ್ಯ ದಂಪತಿಯ ಪುತ್ರ. ಇವರು ಏಳನೇ ತರಗತಿ ವಿದ್ಯಾಭ್ಯಾಸದ ಬಳಿಕ ಆರ್ಗೋಡು ಗೋವಿಂದರಾಯ ಶೆಣೈ ಮತ್ತು ನರಸಿಂಹ ಶೆಣೈಯವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿದರು.

    ಏನಿವರ ಹಿನ್ನೆಲೆ?: ಯಕ್ಷಗಾನ ಇವರಿಗೆ ಜನ್ಮತಃ ಸಿದ್ಧಿಸಿರುವ ಕಲೆ ಎಂದರೂ ತಪ್ಪೇನಲ್ಲ. ಏಕೆಂದರೆ ಇವರು ಯಕ್ಷಗಾನಕ್ಕೆ ಪ್ರಪ್ರಥಮ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಖ್ಯಾತ ಕಲಾವಿದ ಹಾರಾಡಿ ರಾಮ ಗಾಣಿಗರ ಮೊಮ್ಮಗ. ಇವರ ತಂದೆ ಮಂಜಯ್ಯ ಗಾಣಿಗರು ಯಕ್ಷಗಾನ ಅರ್ಥದಾರಿ. ಇಂಥ ಯಕ್ಷಗಾನ ಹಿನ್ನೆಲೆಯಿಂದ ಯಕ್ಷರಂಗಕ್ಕೆ ಧುಮುಕಿದ ಇವರು ತಂದೆಯವರಿಂದ ಮಾತುಗಾರಿಕೆ ಕಲಿತು, ನಂತರ ಹೆಚ್ಚಿನ ಕಲಿಕೆಗಾಗಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದರು.

    ಪರಿಪೂರ್ಣ ಕಲಾವಿದ: ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲ ರಾಯರಂಥ ಘಟಾನುಘಟಿಗಳ ವಿದ್ಯಾರ್ಥಿಯಾಗಿ ಯಕ್ಷಗಾನದ ವಿವಿಧ ಅಂಗಗಳಲ್ಲಿ ಪರಿಪೂರ್ಣತೆ ಸಾಧಿಸಿದರು. ಬಾಲಗೋಪಾಲ, ಸಖಿ, ಸ್ತ್ರೀವೇಷ ಮುಂತಾದ ಪಾತ್ರಗಳನ್ನು ಕಮಲಶಿಲೆ, ಸೌಕೂರು, ರಂಜದಕಟ್ಟೆ, ಪೆರ್ಡೂರು ಮೇಳಗಳಲ್ಲಿ ಅಭಿನಯಿಸಿ ನಂತರ ಇಡಗುಂಜಿ, ಮೂಲ್ಕಿ ಡೇರೆ ಮೇಳಗಳಲ್ಲಿ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು.

    ಛಾಪು ಮೂಡಿಸಿದ ವೇಷಧಾರಿ: ಆಜ್ರಿ ಗೋಪಾಲ ಗಾಣಿಗರ ಭೀಷ್ಮ, ಪರಶುರಾಮ, ರಾವಣ, ಹಿರಣ್ಯಕಶಿಪು, ಋತುಪರ್ಣ, ಕಮಲಭೂಪ, ಭೀಮ ಮುಂತಾದ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ ಮತ್ತು ರಾಮಗಾಣಿಗರ ಛಾಪನ್ನು ಗುರುತಿಸಬಹುದು. ವಿಶೇಷವೆಂದರೆ ಇವರು ಹಾರಾಡಿ ರಾಮ ಗಾಣಿಗರ ಹಾಗೆ ಕೇವಲ ಮಂದಾರ್ತಿ ಮೇಳವೊಂದರಲ್ಲೇ ಸುದೀರ್ಘ‌ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ವೇಷ, ಪುರುಷ ವೇಷ ಎರಡನ್ನೂ ಮಾಡಬಲ್ಲ ಇವರ ಕರ್ಣಾರ್ಜುನದ ಅರ್ಜುನ, ಪುಷ್ಕಳ, ಸುಧನ್ವ ಮುಂತಾದ ಪುರುಷ ವೇಷಗಳು ಹಾರಾಡಿ ಕುಷ್ಟ ಗಾಣಿಗರ ಪಡಿಯಚ್ಚು ಎನ್ನಬಹುದು.

    ಯಕ್ಷಸಿರಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2021ನೇ ಸಾಲಿನ ‘ಯಕ್ಷ ಸಿರಿ’ ಪ್ರಶಸ್ತಿಗೂ ಆಜ್ರಿ ಗೋಪಾಲ ಗಾಣಿಗ ಪಾತ್ರರಾಗಿದ್ದಾರೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಂದಲೂ ಸನ್ಮಾನ, ಗೌರವಾದರಗಳಿಗೂ ಪಾತ್ರರಾಗಿದ್ದಾರೆ.

    ಯುವ ಸಂಘಟನೆಯಿಂದ ಅಭಿನಂದನೆ

    ಆಜ್ರಿ ಗೋಪಾಲ ಗಾಣಿಗರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ್ದರಿಂದ ಇವರನ್ನು ಕೋಟ ಯುವ ಗಾಣಿಗ ಸಂಘಟನೆ ಗೌರವಿಸಿ ಅಭಿನಂದನೆ ಸಲ್ಲಿಸಿದೆ. ಈ ಸಂದರ್ಭದಲ್ಲಿ ಪತ್ರಕರ್ತ ರಾಜೇಶ್‌ ಗಾಣಿಗ ಅಚ್ಲಾಡಿ ಮುಂತಾದವರು ಉಪಸ್ಥಿತರಿದ್ದರು.

    (ಪೂರಕ ಮಾಹಿತಿ: ಪ್ರೊ.ಎಸ್‌.ವಿ.ಉದಯ ಕುಮಾರ ಶೆಟ್ಟಿ, ಕಾರ್ತಿಕ್ ಪ್ರಸಾದ್ ಕೋಡಿ)

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಂಬಂಧಿತ ಸುದ್ದಿ: ಆಜ್ರಿ ಗೋಪಾಲ ಗಾಣಿಗರಿಗೆ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!