ಬೆಂಗಳೂರು: ದೇವನಹಳ್ಳಿ ಪುರಸಭೆಯ ಅಧ್ಯಕ್ಷೆ ಆಗಿ ರೇಖಾ ವೇಣುಗೋಪಾಲ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇವರೊಂದಿಗೆ ಉಪಾಧ್ಯಕ್ಷೆ ಆಗಿ ಪುಷ್ಪಲತಾ ಲಕ್ಷ್ಮೀನಾರಾಯಣ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
23 ಸದಸ್ಯರಿರುವ ದೇವನಹಳ್ಳಿ ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಪ್ರತಿಸ್ಪರ್ಧಿಯಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸದೆ ಇದ್ದಿದ್ದರಿಂದ ಚುನಾವಣಾಧಿಕಾರಿ ಅಜಿತ್ ಕುಮಾರ್ ರೈ ಅವರು ಇಬ್ಬರನ್ನೂ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ನ. 6ರಂದು ಚುನಾವಣೆ ನಡೆದಿದ್ದು, ಈ ಸಂದರ್ಭದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕ ಮುನಿನರಸಿಂಹಯ್ಯ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್ ಮುಂತಾದವರಿದ್ದರು.
ಗಾಣಿಗ ಸಮುದಾಯದವರಾಗಿರುವ ಹಾಗೂ ದೇವನಹಳ್ಳಿಯ ಪಾಲಿಕೆ ಸದಸ್ಯ ವೇಣುಗೋಪಾಲ್ (ಗೋಪಿ) ಅವರ ಪತ್ನಿ ಆಗಿರುವ ರೇಖಾ, ಆರನೇ ವಾರ್ಡ್ ಪಾಲಿಕೆ ಸದಸ್ಯರು.
ಸರ್ಕಾರದಿಂದ ಬರುವ ಅನುದಾನವನ್ನು ಎಲ್ಲ ವಾರ್ಡ್ಗೂ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಚುನಾವಣೆ ಇದ್ದಾಗ ಮಾತ್ರ ನಮ್ಮಲ್ಲಿ ಪಕ್ಷಭೇದ, ಇನ್ನು ಮುಂದೆ ಪಟ್ಟಣದ ಅಭಿವೃದ್ಧಿಗಾಗಿ ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡೋಣ.
| ರೇಖಾ ವೇಣುಗೋಪಾಲ್ ಅಧ್ಯಕ್ಷೆ, ದೇವನಹಳ್ಳಿ ಪುರಸಭೆ.