ಬೆಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಸ್ಥಾನ ನಾಗಸ್ವರ ವಾದಕ ಲಿಂಗಪ್ಪ ಶೇರಿಗಾರ ಅವರು ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ್ದರಿಂದ ಡಿಸೆಂಬರ್ 6ರಂದು ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
ಕಟೀಲು ಶ್ರೀ ಲಿಂಗಪ್ಪ ಶೇರಿಗಾರ ಅಭಿಮಾನಿ ಬಳಗ ಮತ್ತು ಊರ ಹತ್ತು ಸಮಸ್ತರು ಜೊತೆಯಾಗಿ ಈ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು, ಡಿ. 6ರ ಸಂಜೆ 4ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸಮಾರಂಭ ನೆರವೇರಲಿದೆ.
ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರ ಸಾನ್ನಿಧ್ಯ ಹಾಗೂ ಆಶೀರ್ವಚನ ಇರುವ ಈ ಸಮಾರಂಭವನ್ನು ಕಟೀಲು ದೇವಸ್ಥಾನ ಅನುವಂಶಿಕ ಮೊಕ್ತೇಸರ ವೇದಮೂರ್ತಿ ವಾಸುದೇವ ಆಸ್ರಣ್ಣ ಅವರು ಉದ್ಘಾಟಿಸಲಿದ್ದಾರೆ. ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ಅವರ ಶುಭಾಶಂಸನೆ ಈ ಕಾರ್ಯಕ್ರಮಕ್ಕೆ ಇರಲಿದೆ. ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸನ್ಮಾನಿಸಲಿದ್ದಾರೆ. ಅನುವಂಶಿಕ ಮೊಕ್ತೇಸರ ಹಾಗೂ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಅವರು ಸ್ಥಳೀಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ.
ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅಭಿನಂದನಾ ಭಾಷಣ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಸ್ತೂರಿ ಪಂಜ, ಮುಂಬೈ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ್ ರಾವ್, ಕಟೀಲು ಸೌಂದರ್ಯ ಪ್ಯಾಲೇಸ್ ಮಾಲೀಕ ಸೌಂದರ್ಯ ರಮೇಶ್, ಪೆರ್ಮುದೆ ದಿವ್ಯರೂಪ ಕನ್ಸ್ಟ್ರಕ್ಷನ್ಸ್ನ ಯಾದವ ಕೋಟ್ಯಾನ್ ಪೆರ್ಮುದೆ, ಸುರತ್ಕಲ್ ಮಾತಾ ಡೆವೆಲಪರ್ಸ್ ಮಾಲೀಕ ಸಂತೋಷ್ ಕುಮಾರ್ ಶೆಟ್ಟಿ, ಮಂಗಳೂರು ಅಗ್ರಜ ಬಿಲ್ಡರ್ಸ್ ಮಾಲೀಕ ಸಂದೇಶ್ ಕುಮಾರ್ ಶೆಟ್ಟಿ, ರಾಜ್ಯೋತ್ಸವ ಪುರಸ್ಕೃತ ನಾಗೇಶ್ ಬಪ್ಪನಾಡು, ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಈಶ್ವರ ಕಟೀಲು, ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಎಕ್ಕಾರು, ಪೆರ್ಮುದೆ ‘ಕಲ್ಪವೃಕ್ಷ’ದ ಗಿರೀಶ್ ಶೆಟ್ಟಿ ಕಟೀಲು, ಉದ್ಯಮಿ ಪ್ರದ್ಯುಮ್ನ ರಾವ್ ಶಿಬರೂರು ಅವರ ಗೌರವ ಉಪಸ್ಥಿತಿ ಇರಲಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇತರರಾದ ಕೊಡೆತ್ತೂರು ಭುವನಾಭಿರಾಮ ಉಡುಪ, ಮುಖ್ಯಪ್ರಾಣ ಕಿನ್ನಿಗೋಳಿ, ರಾಮಕ್ಕ ಗಿಡಿಗೆರೆ, ಸೀತಾರಾಮ ಕುಮಾರ್ ಕಟೀಲು ಅವರಿಗೂ ಇದೇ ವೇಳೆ ಸನ್ಮಾನ ನಡೆಯಲಿದೆ. ಸಂಜೆ 4ರಿಂದ ಲಿಂಗಪ್ಪ ಶೇರಿಗಾರ ಹಾಗೂ ನಾಗೇಶ್ ಬಪ್ಪನಾಡು ಅವರ ನಾಗಸ್ವರ ವಾದ್ಯಗೋಷ್ಠಿ ಕೂಡ ಇರಲಿದೆ.