ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದವರ ಕುಲದೇವರಾದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಈ ವರ್ಷದ ದೀಪೋತ್ಸವ ಡಿಸೆಂಬರ್ 7ರಂದು ನಡೆಯಲಿದೆ.
ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿ ದೀಪೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಸಲ ಕೊರೊನಾ ಹಾವಳಿ ನಡುವೆಯೂ ಸಕಲ ಮುಂಜಾಗ್ರತೆಯೊಂದಿಗೆ ನೆರವೇರಲಿದೆ. ಡಿ. 7ರ ಸೋಮವಾರ ಬೆಳಗ್ಗೆ 10.30ರಿಂದ ಆರಂಭವಾಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ. ಗೋಪಾಲ್ ಅವರು ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಬೆಂಗಳೂರಿನ ಹೋಟೆಲ್ ‘ಹಳ್ಳಿಮನೆ’ ಮಾಲೀಕ ನೀಲಾವರ ಸಂಜೀವ ರಾವ್ ಅವರು ಉಪಸ್ಥಿತರಿರಲಿದ್ದಾರೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಕೀರ್ತಿಶೇಷ ಹಾರಾಡಿ ರಾಮ ಗಾಣಿಗ ಅವರ ಸ್ಮರಣಾರ್ಥ ನೀಡಲಾಗುವ ‘ಹಾರಾಡಿ ರಾಮ ಗಾಣಿಗ’ ಪ್ರಶಸ್ತಿ ಪ್ರದಾನ ಸಮಾರಂಭವೂ ದೀಪೋತ್ಸವದ ಈ ಸಂದರ್ಭದಲ್ಲೇ ನಡೆಯಲಿದೆ. ಈ ಬಾರಿ ಯಕ್ಷಗಾನ ಕಲಾವಿದ ಕೃಷ್ಣ ಗಾಣಿಗ ಹೊಸಂಗಡಿ ಅವರಿಗೆ ‘ಹಾರಾಡಿ ರಾಮ ಗಾಣಿಗ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜೊತೆಗೆ ಈ ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷಸಿರಿ’ ಪ್ರಶಸ್ತಿಗೆ ಪಾತ್ರರಾದ ಹಾರಾಡಿ ಸರ್ವೋತ್ತಮ ಗಾಣಿಗ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗೇಶ್ ಗಾಣಿಗ ನಾಡ, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಸಂತೋಷ್, ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಹಾಪ್ಕಾಮ್ಸ್ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಸೀತಾರಾಮ ಗಾಣಿಗ ಹಾಲಾಡಿ, ಬ್ರಹ್ಮಾವರದ ದಕ್ಷಿಣಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ರತ್ನಾಕರ ಗಾಣಿಗ ಬಸ್ರೂರು, ಕುಂದಾಪುರ ತಾಲೂಕು ವ್ಯವಸಾಯ ಉತ್ಪನ್ನಗಳ ಸಹಕಾರಿ ಮಾರಾಟ ಸಂಘದ ನಿರ್ದೇಶಕ ರವಿ ಗಾಣಿಗ ಆಜ್ರಿ ಇವರಿಗೆ ಗೌರವಾರ್ಪಣೆ ಕೂಡ ನಡೆಯಲಿದೆ.
ಸಂಜೆ ಬಳಿಕ ದೇವಸ್ಥಾನದಲ್ಲಿ ಸಾಲು ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವ ಆಚರಣೆ ನಡೆಯಲಿದೆ. ಜೊತೆಗೆ ಕುಲದೇವರಾದ ಶ್ರೀವೇಣುಗೋಪಾಲಕೃಷ್ಣನಿಗೆ ದೀಪಾರಾಧನೆ ಸಹಿತ ವಿಶೇಷ ಪೂಜೆಗಳು ನೆರವೇರಲಿವೆ. ಈ ಶುಭ ಸಂದರ್ಭದಲ್ಲಿ ಸಮಾಜದ ಹಲವರು ದೀಪ ಹಚ್ಚುವ ಮೂಲಕ ಕುಲದೇವರ ಕೃಪೆಗೆ ಪಾತ್ರರಾಗಲಿದ್ದಾರೆ.
ಶ್ರೀವೇಣುಗೋಪಾಲಕೃಷ್ಣ ದೇವರಿಗೆ ಪ್ರೀತಿಪಾತ್ರವಾದ ತುಪ್ಪದ ದೀಪದ ಸೇವೆ ಕೂಡ ದೀಪೋತ್ಸವದಂದು ನೆರವೇರಲಿದ್ದು, ಸಮಾಜ ಬಾಂಧವರು 250 ರೂ. ಪಾವತಿಸಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಲೂ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಖಾತೆಗೆ ಆನ್ಲೈನ್ ಮೂಲಕ ಹಣ ಪಾವತಿಸಿ, ಅದರ ರಶೀದಿಯನ್ನು ವಾಟ್ಸ್ಆ್ಯಪ್ ಮೂಲಕ ದೇವಸ್ಥಾನದ ವ್ಯವಸ್ಥಾಪಕ ಗೋಪಾಲ್ (9964987384) ಅವರಿಗೆ ಕಳುಹಿಸಿದರೆ ಸಾಕು.
ದೇವಸ್ಥಾನದ ಬ್ಯಾಂಕ್ ಖಾತೆ ವಿವರ
ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನ, ಮೂಡುಕೇರಿ, ಬಾರ್ಕೂರು
ಖಾತೆ ಸಂಖ್ಯೆ: 520101060316371
ಐಎಫ್ಎಸ್ಸಿ ಕೋಡ್: CORP 0000240