ಬೆಂಗಳೂರು: ಇದುವರೆಗಿನ ಸಾಧನೆ ಜೊತೆಗೆ ಇನ್ನೂ ಸಾಧನೆ ಮಾಡುವ ಮೂಲಕ ನಮ್ಮ ಸಮಾಜಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಇನ್ನೂ ಹೆಚ್ಚಿನ ಹೆಸರು ತರಲು ಪ್ರಯತ್ನಿಸುವೆ ಎಂಬುದಾಗಿ ಪ್ರಜ್ಞಾ ಪ್ರಕಾಶ್ ಹೇಳಿದರು.
ರಾಷ್ಟ್ರಮಟ್ಟದ ಕ್ರೀಡಾಪಟುವಾಗಿರುವ ಇವರು ಕ್ರೀಡಾ ಕ್ಷೇತ್ರದಲ್ಲಿನ ತಮ್ಮ ಸಾಧನೆ ಹಾಗೂ ಅರಣ್ಯ ಇಲಾಖೆಯಲ್ಲಿನ ಸೇವೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ 2017ರ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಪಾತ್ರರಾಗಿದ್ದರು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಚಿನ್ನದ ಪದಕ ಪಡೆದ ಸಲುವಾಗಿ ಗಾಣಿಗ ಸಮಾಜದ ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇವರನ್ನು ಸನ್ಮಾನಿಸಿತು.
ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದ 21ನೇ ಸರ್ವಸದಸ್ಯರ ಸಭೆ ಅರ್ಥಾತ್ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ. 13ರಂದು ಬೆಂಗಳೂರಿನ ಚಾಮರಾಜಪೇಟೆಯ 4ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆಯಲ್ಲಿರುವ ಬಿ.ಎಸ್. ವೆಂಕಟರಾಮ್ ಕಲಾ ಭವನದಲ್ಲಿ ನೆರವೇರಿತು.
ಅರಣ್ಯ ಇಲಾಖೆ ಬಳಿಕ ರೈಲ್ವೇ ಇಲಾಖೆಯ ಉದ್ಯೋಗಿಯಾಗಿ ನೇಮಕಗೊಂಡಿರುವ ಪ್ರಜ್ಞಾ ಪ್ರಕಾಶ್ ಅವರನ್ನು ಈ ಸಂದರ್ಭದಲ್ಲಿ ಸಭೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಇದೇ ವೇಳೆ ಇವರನ್ನು ಸನ್ಮಾನಿಸಿ, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಸೊಸೈಟಿ ಅಧ್ಯಕ್ಷ ಎಂ. ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿಯ ನಿರ್ದೇಶಕಿ ಲಕ್ಷ್ಮೀ ವಿಠಲ್ ಅವರು ಪ್ರಜ್ಞಾ ಪ್ರಕಾಶ್ ಅವರನ್ನು ಸನ್ಮಾನಿಸಿದರು. ಸೊಸೈಟಿ ಉಪಾಧ್ಯಕ್ಷ ಜಿ. ಮಂಜುನಾಥ, ನಿರ್ದೇಶಕರಾದ ಜಿ.ಆರ್. ಚಂದ್ರಯ್ಯ, ಬಿ.ಎಸ್. ಸುಬ್ಬಣ್ಣ, ಪ್ರಕಾಶ್ ವೆಂಕಟರಮಣ, ವಿಠಲ ರಾವ್, ಕೆ.ಎಂ. ಲಕ್ಷ್ಮಣ್, ಎಚ್.ಟಿ. ನರಸಿಂಹ, ಕುತ್ಪಾಡಿ ಎಂ. ಶೇಖರ್, ಜಿ. ರಾಘವೇಂದ್ರ, ಕೆ.ಜಿ. ವಿಜಯಾ, ಎ.ಎಚ್. ಅಚ್ಯುತ, ಬಿ.ಗೋಪಾಲ, ಕರುಣಾಕರ ಹಾಗೂ ಕಾರ್ಯದರ್ಶಿ ಬಿ. ಶೋಭಾ, ಲೆಕ್ಕ ಸಹಾಯಕರಾದ ಕೆ. ಜನಾರ್ದನ, ದೀಪಾ ಶೆಟ್ಟಿ, ಸಂರಕ್ಷಾ, ಸಹಾಯಕ ಸನತ್ ಕುಮಾರ್ ಮುಂತಾದವರಿದ್ದರು.
ಸನ್ಮಾನದ ದೃಶ್ಯಾವಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ