ಬೆಂಗಳೂರು: ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಹಣಾಹಣಿ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನದ ಪೈಕಿ ಒಂದು ಸ್ಥಾನ ಗಾಣಿಗ ಸಮಾಜದ ಪಾಲಾಗಿದೆ. ಇಲ್ಲಿನ ನಾಗವೇಣಿ ಪಂಡರಿನಾಥ ಬಿರ್ತಿ ಅವರು ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಇವರು ಮೂರನೇ ಸಲ ಸದಸ್ಯೆ ಆಗಿದ್ದಾರೆ.
ಈಗಾಗಲೇ ಎರಡು ಬಾರಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರು ತಮ್ಮ ಈ ಹಿಂದಿನ ಅವಧಿಗಳಲ್ಲಿ ತೋರಿದ ಕಾರ್ಯದಕ್ಷತೆಯಿಂದಾಗಿ ಗಳಿಸಿದ ಜನಮೆಚ್ಚುಗೆಯ ಪರಿಣಾಮ ಮೂರನೇ ಸಲ ಪ್ರಯಾಸವಿಲ್ಲದೆ ಆಯ್ಕೆ ಆಗಿದ್ದಾರೆ. ಈ ಅವಧಿಯಲ್ಲೂ ಇವರಿಂದ ಇನ್ನೂ ಹೆಚ್ಚಿನ ಜನಪರ ಕಾರ್ಯಗಳನ್ನು ಸ್ಥಳೀಯರು ನಿರೀಕ್ಷಿಸುತ್ತಿದ್ದು, ಅದು ಸಾಧ್ಯವಾಗುವ ಭರವಸೆ ಹೊಂದಿದ್ದಾರೆ.
ಇವರು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕಿ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಆಡಳಿತ ಮಂಡಳಿಯ ಸದಸ್ಯೆ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಸ್ಥಳೀಯ ಹಲವಾರು ಧಾರ್ಮಿಕ ಸಂಸ್ಥೆಗಳ ಪದಾಧಿಕಾರಿಯಾಗಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಸಕ್ರಿಯ ಕಾರ್ಯಕರ್ತೆಯಾಗಿಯೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.