ಬೆಂಗಳೂರು: ಸಮಾಜದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಅವರನ್ನು ಗುರುತಿಸಿ ಸನ್ಮಾನಿಸಿದರೆ ಅವರನ್ನು ಮತ್ತಷ್ಟು ಸಾಧನೆಗೆ ಹುರಿದುಂಬಿಸಿದಂತಾಗುತ್ತದೆ. ಮಾತ್ರವಲ್ಲ, ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವಿಶೇಷವಾದ ಕಾರ್ಯ ಮಾಡುತ್ತಿದೆ.
ಈ ಟ್ರಸ್ಟ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲಾವಾರು ಆಯ್ಕೆ ಮಾಡಿಕೊಂಡು, ಕೆಲವು ಜಿಲ್ಲೆಗಳಿಗೆ ಹತ್ತಿರ ಎನಿಸುವಂಥ ಒಂದು ಪ್ರದೇಶವೊಂದನ್ನು ಆಯ್ದುಕೊಂಡು, ಅಲ್ಲಿ ಪ್ರತಿಭಾ ಪುರಸ್ಕಾರ ಆಯೋಜಿಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿದೆ.
2019-20ನೇ ಸಾಲಿನ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಈ ಟ್ರಸ್ಟ್ ಇತ್ತೀಚೆಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದೆ. ಮೈಸೂರಿನ ದೇವಾಂಬ ಅಗ್ರಹಾರದ ವಾಣಿಯಾರ್ ಶ್ರೀ ಸೀತಾ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 13ರಂದು ನಡೆದ ಈ ಪ್ರತಿಭಾ ಪುರಸ್ಕಾರದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರೊ. ವಿಶ್ವನಾಥಪ್ಪ ಅವರು ಉದ್ಘಾಟಿಸಿದ್ದು, ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಆರ್. ನಾಗರಾಜ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನ ಮೈಸೂರು ವಲಯ ಸಂಘಟನಾ ಕಾರ್ಯದರ್ಶಿಗಳ ಸಭೆ ಕೂಡ ಇದೇ ಸಂದರ್ಭದಲ್ಲಿ ನಡೆದಿದ್ದು, ಮೈಸೂರು ವಲಯದ ವಿವಿಧ ಪ್ರದೇಶಗಳ ಗಾಣಿಗ ಸಮಾಜದ ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ