ಬೆಂಗಳೂರು: ಬೆಂಗಳೂರಿನಲ್ಲಿರುವ ಸೋಮಕ್ಷತ್ರಿಯ ಗಾಣಿಗ ಸಮಾಜದ ಸದಸ್ಯರಿಗೆ ಡಿಸೆಂಬರ್ ಬಂತೆಂದರೆ ಒಂಥರ ಹಬ್ಬದ ಸಂಭ್ರಮ. ಅದಕ್ಕೆ ಕಾರಣ ಪ್ರತಿ ವರ್ಷಾಂತ್ಯದಲ್ಲಿ ನಡೆಯುವ ‘ಪ್ರತಿಭಾ ಸಂಭ್ರಮ’. ಆದರೆ ಈ ಸಲ ಕೊರೊನಾ ಹಾವಳಿ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸುವ ಹಿನ್ನೆಲೆಯಲ್ಲಿ ‘ಪ್ರತಿಭಾ ಸಂಭ್ರಮ’ವನ್ನು ಆಚರಿಸದಿರಲು ಸಂಘವು ನಿರ್ಧರಿಸಿದೆ.
‘ಪ್ರತಿಭಾ ಸಂಭ್ರಮ’ವು ಸಮಾಜದ ಸದಸ್ಯರು ವರ್ಷಕ್ಕೊಮ್ಮೆ ದೊಡ್ಡಮಟ್ಟದಲ್ಲಿ ಒಂದೆಡೆ ಸೇರಲು ಅವಕಾಶ ಮಾಡಿಕೊಡುತ್ತಿತ್ತು. ಆದರೆ ಈ ಸಲ ಅಂಥದ್ದೊಂದು ಸಂಭ್ರಮದ ವಾತಾವರಣವನ್ನು ಸಮಾಜದ ಸದಸ್ಯರು ಮಿಸ್ ಮಾಡಿಕೊಳ್ಳುವಂತಾಗಿದೆ. ಅದಾಗ್ಯೂ ಸಮಾಜದ ಸದಸ್ಯರನ್ನು ಸಾಕಷ್ಟು ಸಂಖ್ಯೆಯಲ್ಲಿ ಒಂದೆಡೆ ಸೇರಿಸುವಂಥ ಸೋಮಕ್ಷತ್ರಿಯ ಗಾಣಿಗ ಸಮಾಜದ ವಾರ್ಷಿಕ ಮಹಾಸಭೆ ಇದೇ ವರ್ಷಾಂತ್ಯದಲ್ಲಿ ನಡೆಯಲಿದ್ದು, ಅದು ಕೂಡ ದೊಡ್ಡಮಟ್ಟದಲ್ಲೇ ಸಮಾಜಬಾಂಧವರನ್ನು ಒಂದೆಡೆ ಸೇರಿಸಲಿದೆ.
ಸೋಮಕ್ಷತ್ರಿಯ ಗಾಣಿಗ ಸಮಾಜದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ಡಿ.27ರ ಭಾನುವಾರ ಮಧ್ಯಾಹ್ನ 2.30ರಿಂದ ಬೆಂಗಳೂರಿನ ಚಾಮರಾಜಪೇಟೆ ಮಕ್ಕಳ ಕೂಟ ಸಮೀಪದ ರಾಯರಾಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಕೂಡ ಜರುಗಲಿದೆ.
ಇದೇ ಸಂದರ್ಭದಲ್ಲಿ ಸಮಾಜದ ಸದಸ್ಯರಿಗೆಂದೇ ‘ಯಕ್ಷಗಾನ ತರಬೇತಿ ತರಗತಿ’ಯ ಉದ್ಘಾಟನೆಯೂ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಶ್ರೀನಿವಾಸ ಸಾಸ್ತಾನ ಅವರು ಯಕ್ಷಗಾನ ಕಲಿಕಾ ಕೇಂದ್ರ ಉದ್ಘಾಟಿಸಲಿದ್ದಾರೆ. ಇನ್ನೊಬ್ಬ ಸದಸ್ಯ, ನಮ್ಮ ಸಮಾಜದ ಕೆ.ಎಂ. ಶೇಖರ್ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ.
ಬೆಂಗಳೂರಿನಲ್ಲಿರುವ ನಮ್ಮ ಸಮಾಜ ಬಾಂಧವರು ಈ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ತರಬೇತಿ ಪಡೆಯುವ ಆಸಕ್ತಿ ಇದ್ದಲ್ಲಿ ಅಂದೇ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗಾಗಿ ರಮೇಶ್ ಮಟಪಾಡಿ (9483545008), ಎನ್. ರಾಘವೇಂದ್ರ (9845398309), ಶ್ರೀಧರ ನಾಗೂರು (9036159840) ಅವರನ್ನು ಸಂಪರ್ಕಿಸಬಹುದು ಎಂದು ಸಂಘದ ಕಾರ್ಯದರ್ಶಿ ಎಚ್. ಜಗದೀಶ್ ತಿಳಿಸಿದ್ದಾರೆ.