ಬೆಂಗಳೂರು: ಶಿವಮೊಗ್ಗ ಜಿಲ್ಲಾ ಗಾಣಿಗರ ಸಂಘದ 24ನೇ ವಾರ್ಷಿಕ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಫೆಬ್ರವರಿ 14ರಂದು ಶಿವಮೊಗ್ಗದ ಡಾ.ಆರ್.ಎಂ.ಎಲ್. ನಗರದ ಶಿವಮೊಗ್ಗ ಜಿಲ್ಲಾ ಗಾಣಿಗರ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಈ ಸಮಾರಂಭ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಶ್ರೀ ಶನೈಶ್ಚರ ದೇವರ ಹತ್ತನೇ ವರ್ಷದ ಪ್ರತಿಷ್ಠಾಪನಾ ಸಮಾರಂಭವೂ ನೆರವೇರಲಿದೆ.
ಶಿವಮೊಗ್ಗದ ನವಮಾನಸ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್. ಸುಬ್ಬಯ್ಯ ಅವರು ಈ ಸಮಾರಂಭವನ್ನು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದು, ನಿವೃತ್ತ ಕೆಎಎಸ್ ಅಧಿಕಾರಿಯೂ ಆಗಿರುವ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್. ನಾಗರಾಜ ಶೆಟ್ಟಿ ಅವರು ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಬಿ. ಮಂಜುನಾಥ್, ಸಾಗರ ಪವಿತ್ರ ರೆಸಿಡೆನ್ಸಿ ಮಾಲೀಕ ಎಂ. ನಾಗರಾಜ್, ಭದ್ರಾವತಿಯ ಬಸಲಿಕಟ್ಟೆಯ ಪ್ರಗತಿಪರ ಕೃಷಿಕ ಕೆ. ಮಂಜುನಾಥ್, ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಪಿ. ಶಿವಣ್ಣ, ಶಿವಮೊಗ್ಗ ಮಾನಸ ವಿದ್ಯಾಲಯದ ಅಧ್ಯಕ್ಷ ಯು.ಎನ್. ರಾಮಕೃಷ್ಣ ಅವರು ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಎಂ. ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸತ್ಯನಾರಾಯಣಸ್ವಾಮಿ ಪೂಜೆ: ಶ್ರೀ ಶನೈಶ್ಚರ ದೇವರ ಪ್ರತಿಷ್ಠಾಪನೆಯ ಹತ್ತನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಗಾಣಿಗರ ಸಂಘವು ಶ್ರೀ ಸತ್ಯನಾರಾಯಣಸ್ವಾಮಿ ಪೂಜೆಯನ್ನೂ ಏರ್ಪಡಿಸಿದೆ. ಬೆಳಗ್ಗೆ 8.30 ಗಂಟೆಗೆ ಸತ್ಯನಾರಾಯಣ ಪೂಜೆ ನಡೆಯಲಿದೆ.