ಬೆಂಗಳೂರು: ಗಾಣಿಗ ಸಮಾಜದವರ ಸಂಘಟನೆಗಾಗಿ, ಸಮಾಜ ಬಾಂಧವರ ಸಂಪರ್ಕ ಸಾಧಿಸಲು, ಸಮಾಜದವರಿಗೆ ಸಹಾಯ ಮಾಡುವ ಸಲುವಾಗಿ ರಾಜ್ಯ-ಹೊರ ರಾಜ್ಯಗಳಲ್ಲೂ ಗಾಣಿಗ ಸಮುದಾಯಕ್ಕೆ ಸೀಮಿತವಾದ ಹಲವಾರು ಸಂಘ-ಸಂಘಟನೆಗಳು ಸ್ಥಾಪನೆಗೊಂಡಿದ್ದು, ಆ ಪೈಕಿ ಕುಮಟಾ ಗಾಣಿಗ ಯುವ ಬಳಗ ಕೂಡ ಒಂದು.
೨೦೨೦ರ ಅಕ್ಟೋಬರ್ ೨ರಂದು ಸ್ಥಾಪನೆಗೊಂಡಿರುವ ಕುಮಟಾ ಗಾಣಿಗ ಯುವ ಬಳಗ (ರಿ.) ಆರಂಭವಾದ ಮೊದಲ ವರ್ಷವೇ ಸಾಕಷ್ಟು ಸಾಮಾಜಿಕ ಕಳಕಳಿ ತೋರಿದೆ. ಮಾತ್ರವಲ್ಲ, ಕಳೆದ ವರ್ಷ ಕಾಡಿದ ಕೊರೊನಾ ಸಾಂಕ್ರಾಮಿಕ ಪಿಡುಗಿನ ವೇಳೆ ವಿಧಿಸಲಾಗಿದ್ದ ಲಾಕ್ಡೌನ್ ಸಂದರ್ಭದಲ್ಲೂ ಅಗತ್ಯವಿರುವ ಅನೇಕರಿಗೆ ತನ್ನಿಂದಾದ ನೆರವನ್ನೂ ನೀಡಿದೆ.
ಸಮಾಜ ಬಾಂಧವರಿಗಾಗಿ ಕೆಲವೊಂದು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಜೊತೆಜೊತೆಗೆ ಸಂಕಷ್ಟದಲ್ಲಿರುವ ಸಮಾಜಬಾಂಧವರಿಗೆ ಸಹಾಯವನ್ನೂ ಮಾಡಿದೆ. ಕೋವಿಡ್-19 ಲಾಕ್ಡೌನ್ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಯುವ ಬಳಗವು ಗಾಣಿಗ ಸಮಾಜದ 110 ಬಡ ಕುಟುಂಬಗಳಿಗೆ, ಪ್ರತಿ ಮನೆಗೆ ತಲಾ 1000 ರೂಪಾಯಿ ಮೊತ್ತದ ದಿನಸಿ ಕಿಟ್ ನೀಡಿದೆ. ಮಾತ್ರವಲ್ಲದೆ ಆ ಬಳಿಕ ಗಾಣಿಗ ಸಮಾಜದ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಮನೆಗೇ ತೆರಳಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದೆ.
ಈ ಎಲ್ಲದರ ಜೊತೆಗೆ ಗಂಭೀರವಾದ ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜಬಾಂಧವರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಸಮಾಜದ ಸೇವೆಯಲ್ಲಿ ತೊಡಗಿಕೊಂಡಿದೆ. ಇನ್ನುಮುಂದೆಯೂ ಹಲವಾರು ವಿನೂತನ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಕುಮಟಾ ಯುವ ಬಳಗ ಸಜ್ಜಾಗಿದ್ದು, ಸಮಾಜಬಾಂಧವರಿಂದ ಇದುವರೆಗೆ ಸಿಕ್ಕಿರುವ ಪ್ರೋತ್ಸಾಹ-ಬೆಂಬಲಕ್ಕೆ ಕೃತಜ್ಞತೆಯನ್ನು ಸಲ್ಲಿಸಿದೆ. ಮಾತ್ರವಲ್ಲ ಬಳಗವು ಭವಿಷ್ಯದಲ್ಲಿ ಹಮ್ಮಿಕೊಳ್ಳುವ ಎಲ್ಲ ಸಮಾರಂಭ-ಸಹಾಯಾರ್ಥ ಕಾರ್ಯಗಳಿಗೆ ಸಮಾಜದ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಬಳಗದ ಸದಸ್ಯರು ಕೋರಿಕೊಂಡಿದ್ದಾರೆ.
ಸಂಬಂಧಿತ ಸುದ್ದಿ: ಪುರಾಣ ಪ್ರಸಿದ್ಧ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ಸಂಪನ್ನ
ಸಂಬಂಧಿತ ಸುದ್ದಿ: ಏ.1ರಂದು ಶ್ರೀಮದ್ ವ್ಯಾಸರಾಜರ 480ನೇ ಆರಾಧನಾ ಮಹೋತ್ಸವ
ಸಂಬಂಧಿತ ಸುದ್ದಿ: ದೊಡ್ಮನೆ ಹುಡುಗ್ರಿಗೆ ಗಾಣಿಗ ಪ್ರೀಮಿಯರ್ ಕಪ್, ಕುಮಟಾ ಚಾಲೆಂಜರ್ಸ್ಗೆ ರನ್ನರ್ ಅಪ್
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. G-Mail ID: [email protected]