ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಉದಯ ಗಾಣಿಗ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಅಷ್ಟೂ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮಕೈಗೊಳ್ಳಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಉದಯ ಗಾಣಿಗ ಕೊಳವೆ ಬಾವಿ ತೆಗೆಯಲು ಅರ್ಜಿ ಹಾಕಿದ್ದಾಗ ಅವರ ತಂದೆಯ ಹೆಸರಲ್ಲಿ ಆಕ್ಷೇಪ ಇರುವುದಾಗಿ ಪಂಚಾಯತ್ನವರು ಕಥೆ ಕಟ್ಟಿದ್ದರು. ಬಳಿಕ ಉದಯ ಗಾಣಿಗ ತಂದೆಯನ್ನೇ ಕರೆದುಕೊಂಡು ಹೋಗಿ ಸ್ಪಷ್ಟನೆ ನೀಡಿದಾಗ ಪಂಚಾಯತ್ನವರು ಉದ್ಧಟತನದ ಮಾತುಗಳನ್ನಾಡಿ ಕಳುಹಿಸಿದ್ದು ನನಗೆ ತಿಳಿದುಬಂದಿದೆ. ಪಂಚಾಯತ್ ಇರುವುದು ಜನರಿಗೆ ಸಹಾಯ ಮಾಡಲು, ದಬ್ಬಾಳಿಕೆ ಮಾಡಲಿಕ್ಕೆ ಅಲ್ಲ. ಅಂಥ ಪಂಚಾಯತ್ ಅಧ್ಯಕ್ಷರೇ ಕೊಲೆಯಂಥ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಬೈಂದೂರು ಕ್ಷೇತ್ರ ಬಿಹಾರವನ್ನು ನೆನಪಿಸುವಂತೆ ಆಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉದಯ ಗಾಣಿಗ ಅವರು ಕೃಷಿ ಉತ್ಪನ್ನ ಅಂಗಡಿ ತೆರೆದು ಜೀವನ ನಡೆಸಿಕೊಂಡು ಬಂದವರು. ಲಾಕ್ಡೌನ್ ಸಂದರ್ಭದಲ್ಲಿ ಕೃಷಿಕರ ಅನುಕೂಲಕ್ಕಾಗಿ ಅಂಥ ಅಂಗಡಿ ತೆರೆಯಲು ಸರ್ಕಾರದ ಅನುಮತಿ ಇದ್ದರೂ ಅವರಿಗೆ ಅಂಗಡಿಗೆ ಹೋಗದಂತೆ ತಡೆದಿದ್ದಾರೆ. ಈ ವಿಚಾರವಾಗಿ ಬಳಿಕ ಅವರನ್ನು ಕರೆಸಿ ಹತ್ಯೆ ಮಾಡಲಾಗಿದೆ. ಸಂಚು ಹೂಡಿಯೇ ಈ ಕೊಲೆಯನ್ನು ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಯಾರೂ ತಪ್ಪಿಸಿಕೊಳ್ಳಬಾರದು. ಅಷ್ಟೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಒತ್ತಾಯಿಸಿದ್ದಾರೆ.
ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಆರೋಪಿ ಪ್ರಾಣೇಶ್ ಬಂಧನ; ಪ್ರಶ್ನಿಸಿದ್ದಕ್ಕೆ ಪ್ರಾಣ ತೆಗೆದ ಗ್ರಾಮ ಪಂಚಾಯತ್ ಅಧ್ಯಕ್ಷ?
ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾ ಗಾಣಿಗ ಸಂಘಟನೆ ಆಗ್ರಹ
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. G-Mail ID: [email protected]