ಬೆಂಗಳೂರು: ‘ಕನ್ನಡ ಕಲಿಸುತ್ತಿರುವ ಸಮಾಜದ ಶಿಕ್ಷಕಿ..’ -ಹೀಗೆಂದಾಕ್ಷಣ.. ‘ಇದೇನಿದು ಸಮಾಜ ಶಿಕ್ಷಕಿ ಕನ್ನಡ ಕಲಿಸುತ್ತಿದ್ದಾರಾ?’ ಎಂಬ ಯೋಚನೆಯೊಂದು ಬಂದುಹೋದರೂ ಅಚ್ಚರಿಯೇನಲ್ಲ. ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದಾಗ ಒಂದು ವಿಷಯದ ಪಾಠ ಮಾಡುವ ಶಿಕ್ಷಕರೇ ಇನ್ನೊಂದು ವಿಷಯದ ಪಾಠವನ್ನೂ ಮಾಡುವುದು ಹೊಸದೇನಲ್ಲ. ಆದರೆ ಇದು ಆ ರೀತಿಯ ವಿಚಾರವಲ್ಲ, ಇವರು ಮೂಲತಃ ಕನ್ನಡ ಶಿಕ್ಷಕಿಯೇ. ಅಷ್ಟಕ್ಕೂ ಇಲ್ಲಿ ಸಮಾಜದ ಶಿಕ್ಷಕಿ ಎಂದು ಹೇಳಿರುವುದಕ್ಕೆ ಬೇರೆಯದೇ ವ್ಯಾಖ್ಯಾನವಿದೆ. ಗಾಣಿಗ ಸಮಾಜದವರಾದ ಈ ಶಿಕ್ಷಕಿ, ಕನ್ನಡದ ಮೇಲಿನ ಅತೀವ ಅಭಿಮಾನದಿಂದ ಇದೀಗ ತನ್ನ ವಿದ್ಯಾರ್ಥಿಗಳಲ್ಲದೆ, ಕನ್ನಡ ತಿಳಿದಿರದ ಇತರರಿಗೂ ಕನ್ನಡ ಕಲಿಸಲು ಆರಂಭಿಸಿದ್ದಾರೆ.
ಬೆಂಗಳೂರಿನ ಹೊರಮಾವು ನಿವಾಸಿಯಾಗಿರುವ ಆಶಾ ದಿನೇಶ್, ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಪ್ರಾಥಮಿಕ ವಿಭಾಗದಲ್ಲಿ ಕನ್ನಡ ಅಧ್ಯಾಪಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿನ ಬಹಳಷ್ಟು ಮಕ್ಕಳಿಗೆ ಹಾಗೂ ಅವರ ತಾಯಿ-ತಂದೆಗೆ ಸರಿಯಾಗಿ ಕನ್ನಡ ಬರದಿರುವುದನ್ನು ಅರಿತ ಇವರು, ವಿದ್ಯಾರ್ಥಿಗಳ ಜತೆಗೆ ಇತರರಿಗೂ ಕನ್ನಡ ಕಲಿಸಲು ಮುಂದಾಗಿದ್ದಾರೆ. ಆ ಮೂಲಕ ಒಂದು ಆಶಾದಾಯಕ ಬೆಳವಣಿಗೆಗೆ ಕಾರಣರಾಗಿದ್ದಾರೆ ಶಿಕ್ಷಕಿ ಆಶಾ ದಿನೇಶ್.
ನಾನು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ಶೇ. ೧೦ರಿಂದ ೧೫ ವಿದ್ಯಾರ್ಥಿಗಳು ಮಾತ್ರ ಕನ್ನಡದವರು. ಆದರೆ ಅವರ ಜೊತೆಗೆ ಅವರ ಪೋಷಕರಿಗೂ ಕನ್ನಡ ಕಲಿಯುವ ಆಸೆ ಇದ್ದುದನ್ನು ಗಮನಿಸಿದ್ದೆ. ಇನ್ನು ಕೆಲವು ಪೋಷಕರು ನಮಗೂ ಆನ್ಲೈನ್ನಲ್ಲಿ ಕನ್ನಡ ಕಲಿಸಿ ಎಂದು ಕಳೆದ ಲಾಕ್ಡೌನ್ ಸಂದರ್ಭದಲ್ಲಿ ದುಂಬಾಲು ಬಿದ್ದಿದ್ದರು. ಹೀಗಾಗಿ ನನ್ನ ಮಗನ ನೆರವಿನಿಂದ ಯೂ-ಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿ ಕನ್ನಡ ಕಲಿಸಲು ಆರಂಭಿಸಿದೆ. ಈಗ ಅದನ್ನು ನೋಡಿ ಹಲವರು ಕನ್ನಡ ಕಲಿಯುತ್ತಿದ್ದಾರೆ. ಆ ಚಾನೆಲ್ ಮೂಲಕ ನಿಯಮಿತವಾಗಿ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂಬ ಖುಷಿ ಹಂಚಿಕೊಂಡಿದ್ದಾರೆ ಆಶಾ ದಿನೇಶ್.
ಇವರ ಕನ್ನಡ ಕಲಿಕೆಯ ತರಗತಿಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.
ಕೂತು ತಿಂದರೂ ಸವೆಯದ ಆಸ್ತಿ ಮಾಡಿದ ಬರಿಗೈ ಮಾಲೀಕ!
‘ಒಳ್ಳೆ ಗಾಣಿಗರೆಣ್ಣೆ..’; ತನ್ಮಯರಾಗಿಸುವಂತೆ ಹಾಡಿದ್ದಾರೆ ತನುಜಾ..