ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನೂತನ ಸಂಪುಟ ರಚನೆಯಾದ ಬೆನ್ನಿಗೇ ಉಂಟಾಗಿರುವ ಅಸಮಾಧಾನದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ದಿನೇದಿನೆ ಹೊಸಹೊಸ ಕುತೂಹಲಕರ ಬೆಳವಣಿಗೆಗಳಾಗುತ್ತಿವೆ.
ಸಂಪುಟ ಸೃಷ್ಟಿಸಿದ ಸಂಕಷ್ಟದ ವಿಚಾರವಾಗಿ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಾತ್ರವಲ್ಲದೆ ಬಂಡೆದ್ದ ಶಾಸಕರೊಂದಿಗೆ ಮತ್ತಷ್ಟು ಶಾಸಕರು ಜೊತೆಯಾದರೆ ಆಡಳಿತಕ್ಕೆ ಕುತ್ತುಂಟಾಗುತ್ತದೆ ಎಂಬ ಕಾರಣಕ್ಕೆ ಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸಿಎಂ-ಮಾಜಿ ಸಿಎಂ ಜಂಟಿಯಾಗಿ ಕಾರ್ಯತಂತ್ರಗಳನ್ನು ರೂಪಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ, ಗಾಣಿಗ ಸಮುದಾಯದ ಕೆ. ದಿನಕರ ಶೆಟ್ಟಿಯವರು ಇಂದು ರಾಜಧಾನಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾಜಿ ಸಿಎಂ, ನನ್ನ ಮಾರ್ಗದರ್ಶಕರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆನು ಎಂಬುದಾಗಿ ದಿನಕರ ಶೆಟ್ಟಿಯವರು ಹೇಳಿಕೊಂಡಿದ್ದಾರೆ.
ಗಾಣಿಗ ಸಮುದಾಯ ಲಕ್ಷ್ಮಣ ಸವದಿ ಅವರನ್ನು ಬಿಎಸ್ವೈ ಈ ಹಿಂದೆ ತಮ್ಮ ಸಂಪುಟದಲ್ಲಿ ಅಚ್ಚರಿಕರ ಬೆಳವಣಿಗೆಯಲ್ಲಿ ಸಚಿವರನ್ನಾಗಿಸಿದ್ದರು. ಇದೀಗ ಬಿಎಸ್ವೈ-ದಿನಕರ ಶೆಟ್ಟಿ ಭೇಟಿ ಹಿನ್ನೆಲೆಯಲ್ಲಿ ಒಂದಷ್ಟು ಕುತೂಹಲ ಉಂಟಾಗಿದ್ದು, ಮುಂದೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗಾಣಿಗ ಸಮುದಾಯದ ಜನಪ್ರತಿನಿಧಿಗೆ ಸಚಿವ ಸ್ಥಾನ ಸಿಗಬಹುದೇ ಎಂದು ಸಮಾಜದ ಕೆಲವು ಮುಖಂಡರು ನಿರೀಕ್ಷೆಯಲ್ಲಿರುವುದು ಗೋಚರಿಸಿದೆ.
ಸಂಬಂಧಿತ ಸುದ್ದಿ: ಜನ್ಮದಿನದ ಶುಭಾಶಯ ಕೋರಲು ಬಂದವರಿಗೇ ಶಾಸಕರಿಂದ ಉಡುಗೊರೆ
ಸಂಬಂಧಿತ ಸುದ್ದಿ: ಗಾಣಿಗ ಸಮಾಜಕ್ಕೂ ನಿಗಮ ಸ್ಥಾಪಿಸಿ; ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ
ಸಂಬಂಧಿತ ಸುದ್ದಿ: ‘ಗಾಣಿಗ ಪ್ರೀಮಿಯರ್ ಕಪ್’ ಮೂರನೇ ವರ್ಷದ ಪಂದ್ಯಾವಳಿ ನಾಳೆ ಉದ್ಘಾಟನೆ