ಬೆಂಗಳೂರು: ವಿಪಕ್ಷಗಳ ವಿರುದ್ಧ ಬಿಜೆಪಿಯ ಜನಾಶೀರ್ವಾದ ಯಾತ್ರೆ ನಾಳೆ ಉತ್ತರಕನ್ನಡದಲ್ಲಿ ಇರಲಿದ್ದು, ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ ಚಂದ್ರಶೇಖರ ಅವರೊಂದಿಗೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರೂ ಜೊತೆಯಾಗಲಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಜನಜಾಗೃತಿ ಮೂಡಿಸಲು ಹಾಗೂ ವಿಪಕ್ಷಗಳ ಕುತಂತ್ರಕ್ಕೆ ಪ್ರತಿಯಾಗಿ ಈ ಜನಾಶೀರ್ವಾದ ಯಾತ್ರೆ ನಡೆಸಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಅವರು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ. ಕೇಂದ್ರದ ನೂತನ ಸಚಿವ ಸಂಪುಟದ ಸಚಿವರನ್ನು ಸಂಸತ್ತಿನ ಅಧಿವೇಶನದಲ್ಲಿ ಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಕಾಶ ನೀಡದೆ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಅಡ್ಡಿ ಪಡಿಸಿದ್ದವು. ವಿಪಕ್ಷಗಳ ಈ ಕುತಂತ್ರಕ್ಕೆ ಪ್ರತಿಯಾಗಿ ನೂತನ ಸಚಿವರನ್ನು ಜನರಿಗೆ ಪರಿಚಯಿಸಲು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಆಗಸ್ಟ್ 16ರಿಂದ ಜನಾಶೀರ್ವಾದ ಯಾತ್ರೆ ಪ್ರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ ಚಂದ್ರಶೇಖರ ಅವರು ಜನಾಶೀರ್ವಾದ ಯಾತ್ರೆ ಮೂಲಕ ಆಗಸ್ಟ್ 16ರ ಸೋಮವಾರ ಉತ್ತರಕನ್ನಡಕ್ಕೆ ಆಗಮಿಸಲಿದ್ದಾರೆ ಎಂದು ಶನಿವಾರ ಕುಮಟಾ ಮಂಡಲ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ಈ ವೇಳೆ ಅಧ್ಯಕ್ಷರಾದ ಹೇಮಂತ್ ಕುಮಾರ್ ಗಾಂವ್ಕರ್, ಹಿರಿಯ ಮುಖಂಡ ವಿನೋದ್ ಪ್ರಭು, ನಿಕಟಪೂರ್ವ ಅಧ್ಯಕ್ಷ ಕುಮಾರ್ ಮಾರ್ಕಂಡೇಯ, ಪ್ರಧಾನ ಕಾರ್ಯದರ್ಶಿ ಜಿ.ಐ. ಹೆಗಡೆ, ವಿನಾಯಕ್ ನಾಯ್ಕ್, ಮಂಡಲ ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ, ಯುವಮೋರ್ಚಾ ಅಧ್ಯಕ್ಷ ಜಗದೀಶ್ ಭಟ್, ಯುವಮೋರ್ಚಾ ಜಿಲ್ಲಾ ಸದಸ್ಯ ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಮಾಜಿ ಸಿಎಂ ಯಡಿಯೂರಪ್ಪ-ಶಾಸಕ ದಿನಕರ ಶೆಟ್ಟಿ ಭೇಟಿ; ಗಾಣಿಗ ಸಮುದಾಯದಲ್ಲಿ ಗರಿಗೆದರಿದ ನಿರೀಕ್ಷೆ!
ಸಂಬಂಧಿತ ಸುದ್ದಿ: ನೂತನ ಸಂಪುಟ ರಚನೆ ಬೆನ್ನಿಗೇ ಮತ್ತಷ್ಟು ಕ್ರಿಯಾಶೀಲರಾದ್ರು ಶಾಸಕ ದಿನಕರ ಶೆಟ್ಟಿ
ಸಂಬಂಧಿತ ಸುದ್ದಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕೋರಿದ ಬಿ.ಜೆ. ಪುಟ್ಟಸ್ವಾಮಿ