ಬೆಂಗಳೂರು: ಭಾಗವತಿಕೆಯಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ, ಯಕ್ಷಗಾನರಂಗದಲ್ಲಿ ಹೆಸರಾಂತ ಭಾಗವತ ಎನಿಸಿಕೊಂಡಿರುವ ಹೆರಂಜಾಲು ಗೋಪಾಲ ಗಾಣಿಗ ಅವರಿಗೆ ಸೀತಾನದಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಖ್ಯಾತ ಪ್ರಸಂಗಕರ್ತ, ಯಕ್ಷಗಾನ ಅರ್ಥಧಾರಿ, ಸೀತಾನದಿ ಗಣಪಯ್ಯ ಶೆಟ್ಟಿ ಅವರ ಸ್ಮರಣಾರ್ಥ ನೀಡುವ ಸೀತಾನದಿ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಗೂರಿನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಹೆರಂಜಾಲು ಗೋಪಾಲ ಗಾಣಿಗರಿಗೆ ಪ್ರದಾನ ಮಾಡಲಾಯಿತು.
ಸೀತಾನದಿ ಗಣಪಯ್ಯ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿವರ್ಷ ಯಕ್ಷಗಾನ ಕ್ಷೇತ್ರದ ಒಬ್ಬ ಪ್ರತಿಭಾವಂತ ಅರ್ಹ ಕಲಾವಿದನನ್ನು ಗುರುತಿಸಿ ಗೌರವಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, 34ನೇ ವರ್ಷದ ಸೀತಾನದಿ ಪ್ರಶಸ್ತಿಗೆ ಗೋಪಾಲ ಗಾಣಿಗರು ಭಾಜನರಗಿದ್ದಾರೆ.
ಹೆರಂಜಾಲು ಕುಟುಂಬ ಯಕ್ಷಗಾನ ರಂಗದಲ್ಲಿ ಗುರುತಿಸಿಕೊಂಡಿದ್ದು ಹಾಗೂ ಇನ್ನೂ ತೊಡಗಿಸಿಕೊಂಡಿದೆ. ಸಾಲಿಗ್ರಾಮ, ಮಂದರ್ತಿ ಸೇರಿ ಹಲವಾರು ಮೇಳಗಳಲ್ಲಿ ಭಾಗವತರಾಗಿ ರಂಜಿಸಿರುವ, ಜನಮೆಚ್ಚುಗೆ ಗಳಿಸಿರುವ ಹೆರಂಜಾಲು ಗೋಪಾಲ ಗಾಣಿಗರು ಇದೀಗ ಹೆರಂಜಾಲು ಪ್ರತಿಷ್ಠಾನದ ಮೂಲಕ ಯಕ್ಷಗಾನ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ. ಆ ಮೂಲಕ ಯಕ್ಷರಂಗಕ್ಕೆ ಭವಿಷ್ಯದ ಕಲಾವಿದರನ್ನು ನೀಡಲು ಶ್ರಮಿಸುತ್ತಿದ್ದು, ಯಕ್ಷಗಾನ ಕೇತ್ರಕ್ಕೆ ತಮ್ಮ ಕೊಡುಗೆಯನ್ನು ಮುಂದುವರಿಸಿದ್ದಾರೆ.
ಸಂಬಂಧಿತ ಸುದ್ದಿ: ಮಕ್ಕಳಿಗೆಂದೇ ಯಕ್ಷಗಾನ ಕಲಿಕಾ ತರಬೇತಿ ಕೇಂದ್ರ ಉದ್ಘಾಟನೆ
ಸಂಬಂಧಿತ ಸುದ್ದಿ: ಯಕ್ಷಗಾನ ಕಲಾವಿದ ಕೃಷ್ಣ ಗಾಣಿಗರಿಗೆ ಪಡ್ರೆ ಚಂದು ಪ್ರಶಸ್ತಿ ಪ್ರದಾನ
ಸಂಬಂಧಿತ ಸುದ್ದಿ: ಯಕ್ಷಗಾನ ಅಭ್ಯಾಸದಿಂದ ಶರೀರ, ಶಾರೀರ, ಬುದ್ಧಿಶಕ್ತಿ, ಆರೋಗ್ಯ ವೃದ್ಧಿ