ಬೆಂಗಳೂರು: ಸಫಲ ಸೌಹಾರ್ದ ಸಹಕಾರಿ ನಿಯಮಿತ ಇದರ ದ್ವಿತೀಯ ವಾರ್ಷಿಕ ಮಹಾಸಭೆಯು ಗುರುಪುರ – ಕೈಕಂಬದ ಶ್ರೀ ರಾಮ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂಜೀವ ಅಡ್ಯಾರ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ಶಾಸಕರ ಆಗಮನ: ಸಲಹಾ ಸಮಿತಿ ಸದಸ್ಯರು ಹಾಗೂ ಮಂಗಳೂರು ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ನಾರಾಯಣ ಸಪಲಿಗ ಕಣ್ಣೂರು ದೀಪ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು. ವಾರ್ಷಿಕ ಮಹಾಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಶಾಖಾ ವ್ಯವಸ್ಥಾಪಕ ಪ್ರಮೋದ್ ಕುಮಾರ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಪಿಎಚ್ಡಿ ಪಡೆದಿರುವ ಸಹಕಾರಿಯ ಸದಸ್ಯರಾದ ಡಾ.ಆರ್.ಎಂ. ಪ್ರಸಾದ್ ಅವರನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ಸನ್ಮಾನಿಸಿ, ಶುಭ ಹಾರೈಸಿದರು. ಸಫಲ ಸಹಕಾರಿ ಸಂಸ್ಥೆಯ ಬೆಳವಣಿಗೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ನಿರ್ದೇಶಕ ಮಾಧವ ಮಾವೆ ಆಡಳಿತ ಮಂಡಳಿ ಪರವಾಗಿ ಮಾತನಾಡಿ ಮುಂದಿನ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಿದರು. ಗ್ರಾಹಕರ ಪರವಾಗಿ ಪ್ರಕಾಶ್ ಕೊಲ್ಯ ಮಾತನಾಡಿ, ಸೂಕ್ತ ಸಲಹೆ ನೀಡಿದ್ದಲ್ಲದೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷ ಭಾಷಣ ಮಾಡಿದ ಸಂಜೀವ ಅಡ್ಯಾರ್ ಅವರು, ಸಫಲ ಸಹಕಾರಿ ಸಂಸ್ಥೆ ಬೆಳೆದು ಬಂದ ಬಗೆಯನ್ನು ವಿವರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಳೆದ ಆರ್ಥಿಕ ವರ್ಷದ ಲಾಭಾಂಶದಲ್ಲಿ ಪಾಲುದಾರರಿಗೆ ಶೇ. 6 ಡಿವಿಡೆಂಡ್ ನೀಡುವ ಬಗ್ಗೆ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು. ಗೌರವ ಸಲಹೆಗಾರರಾದ ಯು. ಎಸ್. ಭಾಸ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿದಾಸ್ ವಂದನಾರ್ಪಣೆ ಮಾಡಿದರು. ಎಸ್. ಚಂದ್ರಶೇಖರ ಹಾಗೂ ದೀಪಕ್ ಅಡ್ಯಾರ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಸಂಬಂಧಿತ ಸುದ್ದಿ: ಆರ್.ಎಂ. ಪ್ರಸಾದ್ ಅವರಿಗೆ ಡಾಕ್ಟರೇಟ್; ತೆಂಗಿನೆಣ್ಣೆಯ ಮಹತ್ವ ಸಾರುವ ಪ್ರಬಂಧ ಮಂಡನೆ
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..
ಸಂಬಂಧಿತ ಸುದ್ದಿ: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಗಾಣಿಗರೇ ನಿರ್ಣಾಯಕ; ರಮೇಶ ಭೂಸನೂರ ಗೆಲ್ಲುವ ಸಾಧ್ಯತೆ ಅತ್ಯಧಿಕ