ಬೆಂಗಳೂರು: ಗಾಣಿಗ ಸಮುದಾಯಕ್ಕೆ ನಿಗಮ-ಮಂಡಳಿ ಬೇಕು ಎಂಬುದು ಸಮಾಜದ ಬಹುವರ್ಷಗಳ ಬೇಡಿಕೆ. ಅದಾಗ್ಯೂ ಈ ಬೇಡಿಕೆ ಇನ್ನೂ ಈಡೇರಿಲ್ಲ. ಇತ್ತೀಚೆಗೆ ಈ ಕುರಿತು ಸದನದಲ್ಲಿ ಸಮಾಜದ ಶಾಸಕರಿಬ್ಬರು ದನಿ ಎತ್ತಿದ್ದರಿಂದ ಪುನಃ ಈ ವಿಷಯ ಮುನ್ನೆಲೆಗೆ ಬಂದಿದ್ದು, ಸಮಾಜದ ಮತ್ತಷ್ಟು ಮುಖಂಡರು ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ವಿಶೇಷವೆಂದರೆ ಗಾಣಿಗ ಸಮುದಾಯಕ್ಕೆ ನಿಗಮ-ಮಂಡಳಿ ಸ್ಥಾಪನೆ ಸಂಬಂಧ ಒತ್ತಡ ಹೇರಬೇಕು ಎಂಬುದಾಗಿ ಅಖಿಲ ಕರ್ನಾಟಕ ಗಾಣಿಗ ಸಂಘದ ಪದಾಧಿಕಾರಿಗಳು ಕೇಂದ್ರ ಸಚಿವರಾಗಿರುವ, ಗಾಣಿಗ ಸಮುದಾಯದ ರಾಮೇಶ್ವರ್ ತೇಲಿ ಅವರನ್ನು ಕೆಲವು ದಿನಗಳ ಹಿಂದೆ ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು.
ಇನ್ನು ಇತ್ತೀಚೆಗೆ ಅಧಿವೇಶನದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ದಿನಕರ ಶೆಟ್ಟಿ ಹಾಗೂ ಜಮಖಂಡಿ ಶಾಸಕ ಸಿದ್ದ ನ್ಯಾಮಗೌಡ ಅವರು ಗಾಣಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸುವಂತೆ ಕೋರಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಉತ್ತರಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ಏಕಾಏಕಿ ಬೇಡಿಕೆಯನ್ನು ನಿರಾಕರಿಸಿದ್ದರಿಂದ ಗಾಣಿಗ ಸಮುದಾಯದ ಹಲವಾರು ಮುಖಂಡರು ಕಾರಜೋಳ ವಿರುದ್ಧ ಕಾರವಾಗಿ ಪ್ರತಿಕ್ರಿಯಿಸಿದ್ದರು.
ಅಲ್ಲದೆ ಅದಾದ ಬಳಿಕ ಗಾಣಿಗ ಸಮಾಜದ ಹಲವರು ನಿಗಮ-ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ, ಈ ಸಂಬಂಧ ಗಾಣಿಗ ಸಮಾಜದವರೇ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವತ್ತಲೂ ಚಿತ್ತ ಹರಿಸಿದ್ದಾರೆ. ಅಷ್ಟೇ ಅಲ್ಲದೆ ಆ ನಿಟ್ಟಿನದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಮಾತ್ರವಲ್ಲದೆ ಇ-ಮೇಲ್ ಮೂಲಕ ಪತ್ರವನ್ನೂ ಬರೆದು ರವಾನಿಸಿದ್ದಾರೆ.
ಸಾಹು ಚೌಪಾಲ್ ದಕ್ಷಿಣ ಭಾರತದ ಸಂಚಾಲಕ ಬಿ.ವಿ. ಸುಬ್ಬಯ್ಯ ಅವರು ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಯತ್ನಿಸಿದ್ದರೆ, ಅಖಿಲ ಕರ್ನಾಟಕ ಗಾಣಿಗ ಮಹಸಭಾ ಅಧ್ಯಕ್ಷ ಎಂ. ಚಂದ್ರಶೇಖರ್ ನೇರವಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಇ-ಮೇಲ್ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಇದೀಗ ಗಾಣಿಗ ನಿಗಮ-ಮಂಡಳಿ ಸ್ಥಾಪನೆ ಕುರಿತ ಸಮಾಜದ ಬೇಡಿಕೆ ಧ್ವನಿ ಜೋರಾಗಿದೆ.
ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ
ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?
ಸಂಬಂಧಿತ ಸುದ್ದಿ: ಕೇಂದ್ರ ಸಚಿವರಲ್ಲಿ ಗಾಣಿಗ ನಿಗಮ-ಮಂಡಳಿ ಬೇಡಿಕೆ ಇಟ್ಟ ಮುಖಂಡರು