ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ನೀಡುವ 2022ರ ʼಜಾನಪದ ಲೋಕ ಪ್ರಶಸ್ತಿʼಗೆ ಕಲಬುರಗಿ ತಾಲೂಕಿನ ಹೊನ್ನ ಕೀರಣಗಿ ಗ್ರಾಮದ ಜಾನಪದ ತತ್ವಕಲಾವಿದೆ ಶರಣಮ್ಮ ಪಿ. ಸಜ್ಜನ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ಈ ಆಯ್ಕೆಯನ್ನು ಘೋಷಿಸಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರ ಬಳಿ ಇರುವ ಜಾನಪದ ಲೋಕದಲ್ಲಿ ನಿನ್ನೆಯಿಂದ 2 ದಿನಗಳ ಪ್ರವಾಸಿ ಜನಪದ ಲೋಕೋತ್ಸವ ನಡೆಯುತ್ತಿದ್ದು, ಇಂದು (ಮಾ. 13) ಸಂಜೆ ನಡೆಯುವ ಸಮಾರೋಪ ಸಮಾರಂಭ ಸಂದರ್ಭದಲ್ಲಿ ಜಾನಪದ ಲೋಕ ಪ್ರಶಸ್ತಿ ಪ್ರದಾನ ನಡೆಯಲಿದೆ.
ಜಾನಪದ ಉಳಿವಿಗಾಗಿ ಶರಣಮ್ಮ ಸಜ್ಜನ ಅವರ ಸೇವೆ ಮತ್ತು ಕೊಡುಗೆಗಳನ್ನು ಗಮನಿಸಿ, ಅವರದ್ದು ಜೀವಮಾನದ ಸಾಧನೆ ಎಂದು ಪರಿಗಣಿಸಿ 2022ರ ಜಾನಪದಲೋಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಜೊತೆಗೆ ಹತ್ತು ಸಾವಿರ ರೂ. ನಗದು ಪುರಸ್ಕಾರವೂ ಇರಲಿದೆ ಎಂದು ಪರಿಷತ್ತು ತಿಳಿಸಿದೆ.
ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆಯಾದ ಗಾಣಿಗ ಸಮಾಜದ ಹಿರಿಯ ವ್ಯಕ್ತಿ ಶರಣಮ್ಮ ಸಜ್ಜನ ಅವರನ್ನು ರಾಜ್ಯ ಗಾಣಿಗ ಒಕ್ಕೂಟದ ಸಂಸ್ಥಾಪಕ ನಿರ್ದೇಶಕ ಯತೀಶ್ ಗಾಣಿಗ ಅವರು ಇತ್ತೀಚೆಗೆ ಕಲಬುರಗಿಯಲ್ಲಿ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ರಾಜ್ಯ ಗಾಣಿಗ ಒಕ್ಕೂಟದ ಕಲಬುರಗಿಯ ಉಸ್ತುವಾರಿ ದೇವೇಂದ್ರಪ್ಪ ಸಜ್ಜನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.