ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗಾಣಿಗರ ಯಾನೆ ಸಫಲಿಗರ ಸೇವಾ ಸಂಘದ ಅಧ್ಯಕ್ಷರಾಗಿದ್ದ ಎಂ. ವಿಶ್ವನಾಥ್ (94) ಅವರು ನಿನ್ನೆ ನಿಧನರಾದರು. ಆರೋಗ್ಯಾಧಿಕಾರಿಯಾಗಿ ನಿವೃತ್ತರಾಗಿದ್ದ ಇವರು ಗಾಣಿಗ ಯಾನೆ ಸಫಲಿಗ ಸಮಾಜದ ಸಂಘಟನೆಗೆ ಅಹರ್ನಿಶಿ ಶ್ರಮಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಗಾಣಿಗರ ಯಾನೆ ಸಫಲಿಗ ಸೇವಾ ಸಂಘದ ಅಧ್ಯಕ್ಷ, ಅತ್ತಾವರ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ದಿ ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಹಾಗೂ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.
ಸಾಮಾಜಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಕ್ರಿಯಾಶೀಲರಾಗಿದ್ದ ಇವರು ತುಳು ರಂಗಭೂಮಿಯಲ್ಲಿ ಹಲವಾರು ನಾಟಕ ರಚನೆ ಮಾಡಿದ್ದಲ್ಲದೆ ಪಾತ್ರಧಾರಿಯಾಗಿಯೂ ಮೆಚ್ಚುಗೆ ಗಳಿಸಿದ್ದರು.
ನಿನ್ನೆ ಬೆಳಗ್ಗೆ 8.45ರ ಸುಮಾರಿಗೆ ಇವರು ಕೊನೆಯುಸಿರೆಳೆದಿದ್ದು, ರಾತ್ರಿ ಅಂತಿಮ ಸಂಸ್ಕಾರ ನಡೆಯಿತು. ಇವರು ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿ ವೃಂದವನ್ನು ಅಗಲಿರುತ್ತಾರೆ.
ಗಾಣಿಗ ಯಾನೆ ಸಫಲಿಗ ಸಮಾಜದ ಸಂಘಟನೆಗೆ ಅಹರ್ನಿಶಿ ದುಡಿದ ಸರಳ ಸಜ್ಜನ, ಗಾಣಿಗ ಸಮಾಜದ ಹಿರಿಯ ಮುಖಂಡರಾದ ಎಂ.ವಿಶ್ವನಾಥ್ ಇವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಗಾಣಿಗ ಯಾನೆ ಸಪಲಿಗ ಸೇವಾ ಸಂಘ ಮಿಜಾರ್ – ಎಡಪದವು , ಸಫಲ ಬಳಗ ಮಂಗಳೂರು, ಸಫಲ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ – ಕೈಕಂಬ ಇದರ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು, ಗೌರವ ಸಲಹೆಗಾರರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?
ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..
ಸಂಬಂಧಿತ ಸುದ್ದಿ: ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ಸಫಲ್ಯ ಅವಿರೋಧ ಪುನರಾಯ್ಕೆ