ಬೆಂಗಳೂರು: ಇತ್ತೀಚೆಗೆ ಕಲಬೆರಕೆ ಎಣ್ಣೆ ವಿರುದ್ಧ ಗಾಣಿಗ ಸಮುದಾಯದ ಮುಖಂಡರೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಪ್ರಯತ್ನಿಸಿದ್ದನ್ನು ಗ್ಲೋಬಲ್ ಗಾಣಿಗ.ಕಾಮ್ ಪ್ರಕಟಿಸಿತ್ತು. ಇದೀಗ ಕಲಬೆರಕೆ ಎಣ್ಣೆ ವಿರುದ್ಧ ಜನಜಾಗೃತಿ ಮೂಡಿಸಲು ರಾಜ್ಯ ಗಾಣಿಗ ಒಕ್ಕೂಟ (ರಿ.) ಕೂಡ ಮುಂದಾಗಿದೆ.
ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಕಲಬೆರಕೆ ಎಣ್ಣೆಯಿಂದಾಗಿ ಗಾಣಿಗರು ಕುಲಕಸುಬನ್ನು ಕಳೆದುಕೊಂಡು ಬೇರೆ ವೃತ್ತಿಯನ್ನು ಅವಲಂಬಿಸುವ ಹಾಗಾಗಿದೆ. ಆದರೆ ಕ್ರಮೇಣ ಹೆಚ್ಚುತ್ತಿರುವ ಅನಾರೋಗ್ಯದಿಂದಾಗಿ ಜನರಲ್ಲಿ ಆಹಾರದ ಮಹತ್ವದ ಅರಿವಾಗಲು ಆರಂಭಿಸಿದ್ದು, ಅದರಲ್ಲಿ ನೈಸರ್ಗಿಕ ಗಾಣದ ಎಣ್ಣೆಯ ಪಾತ್ರವೂ ಇರುವುದು ತಿಳಿದುಬಂದಿದೆ. ಅದೇ ಕಾರಣಕ್ಕೆ ಹಲವೆಡೆ ಮತ್ತೆ ಗಾಣಗಳು ತಲೆ ಎತ್ತುತ್ತಿದ್ದು, ದೊಡ್ಡಮಟ್ಟದಲ್ಲೇ ನೈಸರ್ಗಿಕವಾಗಿ ಎಣ್ಣೆಯನ್ನು ತೆಗೆಯುವ ಕಾರ್ಯ ನಡೆಯುತ್ತಿದೆ.
ರಾಜ್ಯ ಗಾಣಿಗ ಒಕ್ಕೂಟದ ಸಂಸ್ಥಾಪಕ ನಿರ್ದೇಶಕ ಯತೀಶ್ ಗಾಣಿಗ ಕೂಡ ಇದೇ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದು, ಕಲಬೆರಕೆ ಎಣ್ಣೆಯ ಹಾನಿಯ ಕುರಿತು ತಿಳಿಸಿಕೊಡುವ ಜೊತೆಗೆ ನೈಸರ್ಗಿಕ ಗಾಣದ ಎಣ್ಣೆಯ ಮಹತ್ವದ ಬಗ್ಗೆಯೂ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮಾತ್ರವಲ್ಲ, ಎಲ್ಲರೂ ಶುದ್ಧ ಹಾಗೂ ನೈಸರ್ಗಿಕ ಗಾಣದ ಎಣ್ಣೆಯನ್ನೇ ಬಳಸಬೇಕು, ಆ ಮೂಲಕ ಆರೋಗ್ಯವನ್ನು ಹೊಂದಬೇಕು ಎಂಬ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮನೆ ಬಾಗಿಲಿಗೆ ಶುದ್ಧ ನೈಸರ್ಗಿಕ ಗಾಣದ ಎಣ್ಣೆಯನ್ನು ತಲುಪಿಸಲು ತಾವು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಆಸಕ್ತರು ಅವರನ್ನು ಸಂಪರ್ಕಿಸಬಹುದು.
ಸಂಬಂಧಿತ ಸುದ್ದಿ: ಕಲಬೆರಕೆ ಎಣ್ಣೆ ವಿರುದ್ಧ ಪ್ರಧಾನಿ ಮೋದಿಯವರಲ್ಲಿ ಮೊರೆ ಇಟ್ಟ ಮುಖಂಡ..
ಸಂಬಂಧಿತ ಸುದ್ದಿ: ಗಾಣದ ಪರಂಪರೆ ಉಳಿಸಲು ಹೀಗೊಂದು ಸಂಪ್ರದಾಯ…
ಸಂಬಂಧಿತ ಸುದ್ದಿ: ಗಾಣಿಗರಿಗಿಲ್ಲಿ ಡಿಸ್ಕೌಂಟ್ನಲ್ಲಿ ಸಿಗಲಿದೆ ಪವರ್ಫುಲ್ ಗಾಣ