ಬೆಂಗಳೂರು: ಕಳೆದ ತಿಂಗಳಷ್ಟೇ ಅಧಿಕೃತವಾಗಿ ಉದ್ಘಾಟನೆಗೊಂಡಿರುವ ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ (ರಿ.) (ಸಿಆರ್ಡಬ್ಲ್ಯುಎ) ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇತ್ತೀಚೆಗೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿ ಬಡಾವಣೆಗೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಸಲ್ಲಿಸಿದರು.
ಶತಮಾನದ ಇತಿಹಾಸ ಇರುವ ಚಾಮರಾಜಪೇಟೆ ಬಡಾವಣೆಗೆ ಇದೇ ಮೊದಲು ಸಂಘ ರಚನೆಯಾಗಿದ್ದು, ಅದರ ಪ್ರಪ್ರಥಮ ಅಧ್ಯಕ್ಷರಾಗಿ ಬಿ.ಎಸ್. ಸುಬ್ಬಣ್ಣ ಆಯ್ಕೆ ಆಗಿದ್ದಾರೆ. ಈ ಸಂಘವನ್ನು ಕಳೆದ ಮಾರ್ಚ್ 20ರಂದು ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಸಂಸದ ಪಿ.ಸಿ. ಮೋಹನ್ ಉದ್ಘಾಟಿಸಿದ್ದರು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರ ಜೊತೆಗೆ ಶಾಸಕ ಜಮೀರ್ ಅಹಮದ್ ಖಾನ್, ವಿಜಯವಾಣಿ ಪತ್ರಿಕೆಯ ಸಂಪಾದಕ ಕೆ.ಎನ್. ಚನ್ನೇಗೌಡ, ಇತಿಹಾಸ ಪರಿಣತ ಧರ್ಮೇಂದ್ರ ಕುಮಾರ್ ಅರೇಹಳ್ಳಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಶಾಸಕ ಜಮೀರ್ ಅಹಮದ್ ಖಾನ್, ಸಂಪಾದಕ ಕೆ.ಎನ್. ಚನ್ನೇಗೌಡ ಅವರಿಗೆ ಬರಲು ಆಗಿರಲಿಲ್ಲ. ಹೀಗಾಗಿ ಇವರಿಬ್ಬರನ್ನೂ ಸಂಘದ ಪದಾಧಿಕಾರಿಗಳು ಬಳಿಕ ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.
ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಸ್ಥಳೀಯ ಶಾಸಕರ ಭವನದಲ್ಲಿ ಭೇಟಿಯಾದ ಸಂಘದವರು ಬಡಾವಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ಸಿಸಿಟಿವಿ ಸೇರಿ ಇತರ ಸೌಕರ್ಯಗಳ ಕುರಿತ ಮನವಿಯನ್ನು ಸಲ್ಲಿಸಿದರು. ಕ್ಷೇತ್ರಕ್ಕೆ ಸಂಬಂಧಿತ ಅನುಕೂಲಗಳನ್ನು ಮಾಡಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.
ವಿಜಯವಾಣಿ ಕಚೇರಿಯಲ್ಲಿ ಸಂಪಾದಕ ಕೆ.ಎನ್. ಚನ್ನೇಗೌಡ ಅವರನ್ನು ಭೇಟಿಯಾದ ಸುಬ್ಬಣ್ಣ ಮತ್ತಿತರರು, ಉದ್ಘಾಟನೆಯ ಸುದ್ದಿಯನ್ನು ಪ್ರಕಟಿಸಿದ ಕುರಿತು ಸಂಪಾದಕರಿಗೆ ಮತ್ತು ವಿಜಯವಾಣಿ ಬಳಗಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ವಿಜಯವಾಣಿ ಕಚೇರಿ ಕೂಡ ಚಾಮರಾಜಪೇಟೆಯಲ್ಲೇ ಇರುವುದರಿಂದ ಸಿಆರ್ಡಬ್ಲ್ಯುಎಗೆ ಪತ್ರಿಕೆ ವಿಶೇಷ ಆದ್ಯತೆ ನೀಡಲಿದೆ ಎಂದು ಸಂಪಾದಕರು ತಿಳಿಸಿದರು.
ಸಂಬಂಧಿತ ಸುದ್ದಿ: ಚಾಮರಾಜಪೇಟೆಗಾಗಿ ಸಂಸದರು-ಶಾಸಕರಿಂದ ಮಾಸಿಕ ಸಭೆ: ಪಿ.ಸಿ.ಮೋಹನ್ ಭರವಸೆ
ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ
ಸಂಬಂಧಿತ ಸುದ್ದಿ: ಡಿವೈಎಸ್ಪಿ ಶಿವಕುಮಾರ್ಗೆ ಮುಖ್ಯಮಂತ್ರಿ ಪದಕ ಪ್ರದಾನ