ಬೆಂಗಳೂರು: ಗಾಣಿಗ ಯುವ ಬಳಗ ಕುಮಟಾ ವತಿಯಿಂದ ಎಸ್ಎಸ್ಎಲ್ಸಿ- ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಆ. 7ರ ರವಿವಾರ ಕುಮಟಾದ ವೈಭವ ಪ್ಯಾಲೇಸ್ನಲ್ಲಿ ನಡೆಯಿತು.
ಇದು ಗಾಣಿಗ ಯುವ ಬಳಗದ ಮೂರನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವಾಗಿದ್ದು, ಇದನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೊಸಾಕುಳಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ ಶೆಟ್ಟಿ ಭಾಗವಹಿಸಿದ್ದರು.
ಈ ಸಲ ಎಸ್ಎಸ್ಎಲ್ಸಿ-ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಇದೇ ವೇಳೆ ಸ್ನೇಹಿತರ ದಿನವನ್ನೂ ಆಚರಣೆ ಮಾಡಲಾಯಿತು. ಕೇಕ್ ಕತ್ತರಿಸುವ ಮೂಲಕ ಶಾರದಾ ಮೋಹನ ಶೆಟ್ಟಿ ಅವರು ಸ್ನೇಹಿತರ ದಿನಾಚರಣೆಗೆ ಚಾಲನೆ ನೀಡಿದರು. ಮಕ್ಕಳು ಇದರಲ್ಲಿ ಸಂಭ್ರಮದಿಂದ ಪಾಲ್ಗೊಂಡರು.
ಯುವ ಬಳಗದ ಗೌರವಾಧ್ಯಕ್ಷ ಗಣಪತಿ ಶೆಟ್ಟಿ ಸ್ವಾಗತ ಭಾಷಣ ಮಾಡಿದರು. ಬಳಗ ನಡೆದು ಬಂದ ದಾರಿ ಹಾಗೂ ಅದರ ಕಾರ್ಯಚಟುವಟಿಕೆ ಬಗ್ಗೆ ಬಳಗದ ಅಧ್ಯಕ್ಷ ಗಣೇಶ ಪ್ರಸಾದ ಶೆಟ್ಟಿ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ವಂದನಾರ್ಪಣೆಯನ್ನು ನಾಗಾರ್ಜುನ ಶೆಟ್ಟಿ, ಸಮಾರಂಭದ ನಿರೂಪಣೆಯನ್ನು ಬಳಗದ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ನಡೆಸಿಕೊಟ್ಟರು.
ಸಂಬಂಧಿತ ಸುದ್ದಿ: ಗಾಣಿಗ ಸಮಾಜ ಯುವಕ ಮಂಡಳದಿಂದ ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ
ಸಂಬಂಧಿತ ಸುದ್ದಿ: ಎಸ್ಜಿಇಸಿಟಿ ಅಕಾಡೆಮಿಗೆ ಪ್ರವೇಶಾತಿ ಆರಂಭ; ಹೀಗಿದೆ ಕೊಡುಗೆ…
ಸಂಬಂಧಿತ ಸುದ್ದಿ: ಜಾತಿ ಸಂಘಟನೆಗಳ ಬೆಂಬಲ ಧಾರಾಳ, ಮಳಲಿ ವಿಠಲ ಗಾಣಿಗರೀಗ ನಿರಾಳ..