ಬೆಂಗಳೂರು: ಕರ್ನಾಟಕ ಸರ್ಕಾರ ಪೊಲೀಸರಿಗೆ ನೀಡುವ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಸಂತೋಷ ಗಾಣಿಗ ಅವರು ಪಾತ್ರರಾಗಿದ್ದು, ನ. 20ರಂದು ಪದಕ ಸ್ವೀಕಾರ ಮಾಡಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಿನ್ನದ ಪದಕ ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಉಡುಪಿಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿರುವ ಸಂತೋಷ ಗಾಣಿಗ ಅವರು ಪ್ರಸ್ತುತ ಬಾಂಬ್ ಸ್ಕ್ವಾಡ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಉತ್ತಮ ಸೇವೆಯನ್ನು ಪರಿಗಣಿಸಿ ಸರ್ಕಾರವು 2018ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. ಸಂತೋಷ ಗಾಣಿಗ ಅವರು ಉಡುಪಿಯ ಅಂಬಲಪಾಡಿ ನಿವಾಸಿ, ಕೆಇಬಿಯ ನಿವೃತ್ತ ಉದ್ಯೋಗಿ ಜಗದೀಶ ಗಾಣಿಗ ಅವರ ಪುತ್ರ.
ಜಗದೀಶ ಗಾಣಿಗ-ಸುನಂದಾ ಗಾಣಿಗ ದಂಪತಿಯ ಇನ್ನಿಬ್ಬರು ಪುತ್ರರು ಭಾರತೀಯ ಸೇನೆಯಲ್ಲಿದ್ದು, ಅವರಲ್ಲಿ ಒಬ್ಬರು ನಿವೃತ್ತರಾಗಿ ಸದ್ಯ ಕೆನರಾ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.