ಬೆಂಗಳೂರು: ರಾಷ್ಟ್ರಮಟ್ಟದ ಕ್ರೀಡಾಪಟು, ಪ್ರಸ್ತುತ ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಹಾಗೂ ಅರಣ್ಯಾಧಿಕಾರಿಯಾಗಿದ್ದ ಪ್ರಜ್ಞಾ ಎಸ್. ಪ್ರಕಾಶ್ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.
ಅರಣ್ಯ ಇಲಾಖೆ ಹಾಗೂ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿರುವ ಸಿಬ್ಬಂದಿ-ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪದಕ ಪ್ರದಾನ ಮಾಡಿದರು.
2017, 2018 ಮತ್ತು 2019ನೇ ಸಾಲಿನ ಮೂರೂ ವರ್ಷಗಳ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ಜೊತೆಯಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನ. 23ರಂದು ನೆರವೇರಿತು. ಅರಣ್ಯ ಸಚಿವ ಆನಂದ ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರ ಸಮ್ಮುಖದಲ್ಲಿ ಪ್ರಜ್ಞಾ 2017ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ಸ್ವೀಕರಿಸಿದರು.
ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಸಾಧನೆ ಮಾಡಿರುವ, ನೃತ್ಯಪಟುವೂ ಆಗಿರುವ ಪ್ರಜ್ಞಾ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು ಪದಕಕ್ಕೆ ಆಯ್ಕೆ ಆಗಿದ್ದರು. ಪ್ರಸ್ತುತ ಭಾರತೀಯ ರೈಲ್ವೆ ಇಲಾಖೆಯ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 2018ರಲ್ಲಿ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಗೂ ಪಾತ್ರರಾಗಿದ್ದರು. ಇವರು ಬೆಂಗಳೂರಿನಲ್ಲಿ ನೆಲೆಸಿರುವ ಎನ್. ಸೂರ್ಯಪ್ರಕಾಶ್-ಜ್ಯೋತಿಪ್ರಕಾಶ್ ದಂಪತಿಯ ಪ್ರಥಮ ಪುತ್ರಿ.