ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವತೆ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಡಿ.7ರಂದು ನಡೆದ ದೀಪ-ಸಂಭ್ರಮ ಗಮನ ಸೆಳೆಯಿತು.
ಕಾರ್ತಿಕ ಮಾಸದಲ್ಲಿ ಇಲ್ಲಿ ವರ್ಷಂಪ್ರತಿ ನಡೆಯವ ದೀಪೋತ್ಸವ ಸಮಾರಂಭ ಈ ಸಲ ಡಿ.7ರಂದು ನೆರವೇರಿದ್ದು, ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ, ಸಮಾಜದಲ್ಲಿನ ಸಾಧಕರಿಗೆ ಸನ್ಮಾನವೂ ಇದ್ದಿದ್ದರಿಂದ ದೀಪಗಳ ಬೆಳಕಿನ ನಡುವೆ ಸಂಭ್ರಮದ ವಾತಾವರಣವೂ ಕಂಡು ಬಂದಿತ್ತು. ಬೆಳಗ್ಗೆಯಿಂದಲೇ ಆರಂಭವಾದ ಕಾರ್ಯಕ್ರಮ ರಾತ್ರಿ ದೀಫೋತ್ಸವದೊಂದಿಗೆ ಸಮಾಪ್ತಿಯಾಯಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ‘ಸಮಾಜ ಬಾಂಧವರೆಲ್ಲರೂ ಕುಲದೇವರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಆಗ ಸಮಾಜದಲ್ಲಿನ ಸಂಘಟನೆ, ಬೆಳವಣಿಗೆ ಸರಾಗವಾಗಿ ಸಾಧ್ಯವಾಗುತ್ತದೆ. ಈ ಮೂಲಕ ಸಮಾಜದವರಿಗೂ ಶ್ರೇಯಸ್ಸಾಗುತ್ತದೆ’ ಎಂದು ಅಧ್ಯಕ್ಷ ಕೆ.ಗೋಪಾಲ್ ಅಭಿಪ್ರಾಯ ಪಟ್ಟರು.
ಸುವರ್ಣ ಮಹೋತ್ಸವದ ಯಕ್ಷನಿಧಿಯಿಂದ ನೀಡಲಾಗುವ ‘ಹಾರಾಡಿ ರಾಮ ಗಾಣಿಗ’ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಹೊಸಂಗಡಿ ಕೃಷ್ಣ ಗಾಣಿಗರಿಗೆ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಸಕ್ತ ಸಾಲಿನ ‘ಯಕ್ಷಸಿರಿ’ ಪ್ರಶಸ್ತಿ ಪುರಸ್ಕೃತ ಹಾರಾಡಿ ಸರ್ವೋತ್ತಮ ಗಾಣಿಗ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗೇಶ್ ಗಾಣಿಗ ನಾಡ, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಂತೋಷ್, ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ, ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ನಿರ್ದೇಶಕ ರತ್ನಾಕರ ಗಾಣಿಗ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರನ್ನು ಸೂರ್ಯನಾರಾಯಣ ಗಾಣಿಗ ಮಟಪಾಡಿ, ರಘುರಾಮ್ ಬೈಕಾಡಿ, ಯೋಗೀಶ್ ಕೊಳಲಗಿರಿ, ರಾಮಕೃಷ್ಣ ಹಾರಾಡಿ ಸಭೆಗೆ ಪರಿಚಯಿಸಿದರು.
ಬಾರ್ಕೂರು ವೇಣುಗೋಪಾಲಕೃಷ್ಣ ಯುವಕ ಸಂಘ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಸಂಘದ ಅಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು. ನಾಗರಾಜ್ ಗಾಣಿಗ ಸಾಲಿಗ್ರಾಮ, ರಾಜೇಶ್ ಗಾಣಿಗ ಅಚ್ಲಾಡಿ ಮತ್ತಿತರರು ಇದ್ದರು.
‘ಹಳ್ಳಿಮನೆ’ಯವರಿಂದ ಅನ್ನಸಂತರ್ಪಣೆ
ಕೊರೊನಾ ಸೋಂಕಿನ ಆತಂಕದ ನಡುವೆಯೂ ಶ್ರೀವೇಣುಗೊಪಾಲಕೃಷ್ಣ ದೇವತಾ ಸನ್ನಿಧಿಯಲ್ಲಿ ದೀಪೋತ್ಸವ ಸರಾಗವಾಗಿ ನೆರವೇರಿದ್ದು, ಐನೂರಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಅಷ್ಟೂ ಜನರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ಬೆಂಗಳೂರಿನ ‘ಹಳ್ಳಿಮನೆ’ ಹೋಟೆಲ್ ಮಾಲೀಕರಾದ ನೀಲಾವರ ಎಂ. ಸಂಜೀವ ರಾವ್ ಅವರು ಉಚಿತವಾಗಿ ಏರ್ಪಾಡು ಮಾಡಿದ್ದರು. ದೀಪೋತ್ಸವದಲ್ಲಿ ಸಮಾಜದ ನೂರಾರು ಮಂದಿ ತುಪ್ಪದ ದೀಪದ ಸೇವೆ ನೀಡುವ ಮೂಲಕ ಕುಲದೇವರ ವಿಶೇಷ ಕೃಪೆಗೆ ಪಾತ್ರರಾದರು.