ಬೆಂಗಳೂರು: ಬರೀ ಭಾರತಕ್ಕಷ್ಟೇ ಬೆಳಕು ನೀಡುತ್ತಿದ್ದ ಗಾಣಿಗ ಸಮಾಜ ಈಗ ವಿಶ್ವಕ್ಕೇ ಬೆಳಕು ನೀಡುವಂತಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿ ಹೇಳಿದ್ದಾರೆ.
ಗಾಣಿಗ ಸಮಾಜದ ಮೋಹನ್ ಲಾಲ್ ಬರೊನಾ ಅವರಿಂದ ತುಮಕೂರಿನಲ್ಲಿ ನಿರ್ಮಿಸಲ್ಪಟ್ಟ ಶ್ರೀವೈಷ್ಣೋದೇವಿ ದೇವಸ್ಥಾನದ ಉದ್ಘಾಟನೆಗೆ ಇತ್ತೀಚೆಗೆ ಆಗಮಿಸಿದ್ದ ಪ್ರಹ್ಲಾದ್ ಮೋದಿ, ನಿರ್ಗಮನ ವೇಳೆ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾದ ಗಾಣಿಗ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮೊದಲು ನಾವು ಗಾಣಿಗರು ಭಾರತಕ್ಕೆ ಮಾತ್ರ ಬೆಳಕು ನೀಡುತ್ತಿದ್ದೆವು. ಈಗ ನರೇಂದ್ರ ಮೋದಿ ಪ್ರಧಾನಿಯಾಗಿ ವಿಶ್ವಗುರು ಎನಿಸಿಕೊಂಡ ಮೇಲೆ ಗಾಣಿಗ ಸಮಾಜ ವಿಶ್ವಕ್ಕೇ ಬೆಳಕು ತೋರುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗಾಣಿಗ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರೊಂದಿಗೆ ಮಾತನಾಡಿದ ಅವರು, ದೇಶದ ಬೇರೆ ಬೇರೆ ಭಾಗಗಳಲ್ಲಿನ ಗಾಣಗಳ ಕುರಿತು ಮಾಹಿತಿ ಹಂಚಿಕೊಂಡರು.
ಪ್ರಧಾನಮಂತ್ರಿ ಜನಕಲ್ಯಾಣ ಯೋಜನೆ ಪ್ರಚಾರ ಪ್ರಸಾರ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗಾಣಿಗ ಸಮಾಜದ ರಾಷ್ಟ್ರಮಟ್ಟದ ನಾಯಕರೂ ಆಗಿರುವ ಪ್ರಹ್ಲಾದ್ ದಾಮೋದರ ದಾಸ್ ಮೋದಿ, ಯಾವಾಗಲೂ ಸಮಾಜಕ್ಕೆ ಸಮುದಾಯಕ್ಕೆ ಬೆಂಬಲವಾಗಿ ಇರುವುದಾಗಿ ಭರವಸೆ ನೀಡಿದರು.