ಬೆಂಗಳೂರು: ಶ್ರೀ ಮದ್ ವ್ಯಾಸರಾಜರಿಂದ ಪ್ರತಿಷ್ಠಾಪಿಸಿ ಪೂಜಿಸಲ್ಪಟ್ಟಿರುವ ಹಾಗೂ ಸೋದೆ ಅರಸು ಮನೆತನದ ಮನೆದೇವರಾಗಿರುವ ಮತ್ತು ಇದೀಗ ಮರಳಿ ಗಾಣಿಗ ಸಮಾಜದ ಸುಪರ್ದಿಗೆ ಸೇರಿರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಇನ್ನು ಒಂದು ವಾರ ಪೂರ್ತಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕು ಹುಲೇಕಲ್ನಲ್ಲಿರುವ ಈ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಡಿ.22ರಿಂದ 29ರವರೆಗೆ ಶ್ರೀ ಲಕ್ಷ್ಮೀನಾರಾಯಣ ಹೃದಯಪಾರಾಯಣ, ಹವನ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಡಿ.22ರಿಂದ 28ರವರೆಗೆ ಪ್ರತಿದಿನ ದೇವರ ಸನ್ನಿಧಿಯಲ್ಲಿ ಪಾರಾಯಣ ಪಠಣಗಳು ನಡೆಯಲಿವೆ.
ಭಕ್ತರು ಈ ಸಮಾರಂಭಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ. ಹಾಗೆಯೇ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿಗಳನ್ನು ದೇವಳದ ಆವರಣದಲ್ಲಿ ಭಕ್ತರು ಕಡ್ಡಾಯವಾಗಿ ಪಾಲಿಸಬೇಕು ಎಂದೂ ಮಂಡಳಿ ವಿನಂತಿಸಿಕೊಂಡಿದೆ.
ದೇವಸ್ಥಾನದಲ್ಲಿ ಸಾಮೂಹಿಕ ಹೋಮ ಸಂಕಲ್ಪ (101 ರೂ.), ಒಂದು ಪಾರಾಯಣ ಮತ್ತು ಹೋಮ ಸಂಕಲ್ಪ (201 ರೂ.), ಏಕಾದಶ ಪಾರಾಯಣ (1,001 ರೂ.), ಏಕವಿಂಶತಿ ಪಾರಾಯಣ (1,501 ರೂ.), ಅಷ್ಟಶತ ಪಾರಾಯಣ (5,001 ರೂ.) ಸೇವೆಗಳನ್ನು ಭಕ್ತರು ಮಾಡಿಸಬಹುದಾಗಿರುತ್ತದೆ.
ಸೇವೆ ಸಂಬಂಧ ಭಕ್ತರು ಹಣ ಸಂದಾಯ ಮಾಡಬೇಕಾದ ಖಾತೆ ವಿವರ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ವಿವರಗಳು ಇಲ್ಲಿವೆ.