ಬೆಂಗಳೂರು: ಗಾಣಿಗ ಸಮುದಾಯದ ಹೆಸರಾಂತ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನ 2019-20ನೇ ಸಾಲಿನ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ. 25ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸೊಂಡೆಕೊಪ್ಪ ಬೈಪಾಸ್ ಸರ್ಕಲ್ ಬಳಿ ಇರುವ ಗಾಣಿಗರ ಸಮುದಾಯ ಭವನದಲ್ಲಿ ನಡೆಯಿತು. ನೆಲಮಂಗಲದ ಗಾಣಿಗರ ಸಂಘ (ರಿ.) ಮತ್ತು ಗಾಣಿಗ ಯುವಜನ ಸೇವಾ ಟ್ರಸ್ಟ್ (ರಿ.) ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮವು ಸಮುದಾಯದ ಸುಮಾರು ಐನೂರು ಮಂದಿಯ ಸಮ್ಮುಖದಲ್ಲಿ ನೆರವೇರಿತು.
ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ಕೆಎಎಸ್ ಅಧಿಕಾರಿ ಆರ್. ನಾಗರಾಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಭೆ ನಡೆದಿದ್ದು, ಟ್ರಸ್ಟ್ನ ಮಹಾಪೋಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರವನ್ನೂ ನೆರವೇರಿಸಲಾಯಿತು. ಬೆಳಗ್ಗೆ 11.30ರಿಂದ ನಡೆದ ಈ ಕಾರ್ಯಕ್ರಮವನ್ನು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜು ಉದ್ಘಾಟಿಸಿದರು. ಮಾತ್ರವಲ್ಲ ಮತ್ತಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಒಂದಷ್ಟು ಕಿವಿಮಾತುಗಳನ್ನು ಹೇಳಿದರು.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ: ಪ್ರಾಥಮಿಕ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಮಂಜುನಾಥ ಅವರು ಮಾಡಿದ ಶೈಕ್ಷಣಿಕ ಭಾಷಣ ಸಮಾಜದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನವನ್ನು ನೀಡಿತು. ಇವರ ಸುಮಾರು ಮುಕ್ಕಾಲು ಗಂಟೆಯ ಮಾತನ್ನು ಮಕ್ಕಳು ಅತೀವ ಆಸಕ್ತಿಯಿಂದ ಆಲಿಸಿದರು.
ಗಣ್ಯರಿಗೆ ಸನ್ಮಾನ: ನಂತರ ಅಧ್ಯಕ್ಷರು-ಉಪಾಧ್ಯಕ್ಷರಿಂದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಮಾಜದ ಗಣ್ಯರಾದ ತಿಪಟೂರು ನಗರಸಭಾ ನೂತನ ಅಧ್ಯಕ್ಷ ಪಿ.ಜೆ. ರಾಮಮೋಹನ್, ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಬಿ. ಮಂಜುನಾಥ, ಹೆಬ್ರಿಯ ತಹಶೀಲ್ದಾರ್ ಕೆ.ಮಹೇಶ್ ಚಂದ್ರ, ಸಹ್ಯಾದ್ರಿ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರೊಫೆಸರ್ ಡಾ.ಕೆ. ಶಿವಕುಮಾರ್, ರಾಜ್ಯಮಟ್ಟದ ಪ್ರಗತಿಪರ ರೈತ ಸಿ.ಆರ್. ರಾಧಾಕೃಷ್ಣ, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಸಂತೋಷ್ ಕುಮಾರ್ ಉಡುಪಿ, ಬೆಂಗಳೂರಿನ ಕಾಮಾಕ್ಷಿಪಾಳ್ಯ ಸ್ಟೇಷನ್ ಹೆಡ್ ಕಾನ್ಸ್ಟೆಬಲ್ ಜಯರಾಮ ಶೆಟ್ಟಿ, ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಪಿ. ಶಿವಣ್ಣ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೆ.ಎಂ. ಶೇಖರ್, ಬಡವರಿಗೆ ಸೇವೆ ನೀಡುತ್ತಿರುವ ಬೆಂಗಳೂರಿನ ಬಿಟಿಎಂ ಬಡಾವಣೆಯ ಡಾ.ವಿಶ್ವಾಸ್ ವಿಜೇತ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: ಪ್ರಾಥಮಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜ್, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಸಂದೇಶ್ ಅವರು ಎಸ್ಎಸ್ಎಲ್ಸಿ- ಪಿಯುಸಿಯಲ್ಲಿ ಸಾಧನೆ ಮಾಡಿರುವ ಸಮಾಜದ ಪ್ರತಿಭಾವಂತ 110 ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ವ್ಯಾಪ್ತಿಯಲ್ಲಿರುವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಸ್ಎಸ್ಎಲ್ಸಿ- ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕೂ ಅಧಿಕ ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಇದಕ್ಕೆ ಪರಿಗಣಿಸಲಾಗಿತ್ತು.
‘ವಿದ್ಯಾಜ್ಯೋತಿ’ ಪ್ರಶಸ್ತಿ ಪ್ರದಾನ: ಆರ್ಥಿಕ ಅಡಚಣೆ ನಡುವೆಯೂ ಶೈಕ್ಷಣಿಕವಾಗಿ ಸಾಧನೆ ಮಾಡಿರುವ ನಮ್ಮ ಸಮಾಜದ ಸಾಧಕ ವಿದ್ಯಾರ್ಥಿಗಳನ್ನೂ ಪುರಸ್ಕರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ 7ನೇ ರ್ಯಾಂಕ್ ಗಳಿಸಿರುವ ಯಶಸ್ವಿನಿ, ಗ್ರಾಮೀಣ ಪ್ರತಿಭೆಗಳಾದ ಚಾಮರಾಜನಗರ ಕುಡ್ಲೂರು ಜಿಲ್ಲೆಯ ಎಂಬಿಬಿಎಸ್ ವಿದ್ಯಾರ್ಥಿ ಎಂ. ದುಷ್ಯಂತ್, ಮಂಡ್ಯ ಜಿಲ್ಲೆ ದಿಡ್ಡಯ್ಯಗಾಟಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ, ಸಿಇಟಿಯಲ್ಲಿ ಅತ್ಯಧಿಕ ಶ್ರೇಣಿಯಲ್ಲಿ ಪಾಸಾಗಿ ಸರ್ಕಾರದಿಂದ ಸೀಟು ಉಚಿತ ಪಡೆದಿರುವ ಡಿ.ಎಂ. ಪ್ರಥ್ವಿರಾಜ್ ಅವರಿಗೆ ಟ್ರಸ್ಟ್ನಿಂದ ‘ವಿದ್ಯಾಜ್ಯೋತಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.