ಬೆಂಗಳೂರು: ಗಾಣದಿಂದ ಸಾಂಪ್ರದಾಯಿಕವಾಗಿ ಎಣ್ಣೆ ತೆಗೆಯುವ ಪದ್ಧತಿಯೇ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಸಂಸ್ಥೆಯೊಂದು ಮುಂದಾಗಿದೆ. ಆ ನಿಟ್ಟಿನಲ್ಲಿ ಅದು ಕಾರ್ಯಾಗಾರವನ್ನೂ ಹಮ್ಮಿಕೊಂಡಿದ್ದು, ಅದು ಇದೇ ತಿಂಗಳಾಂತ್ಯದಲ್ಲಿ ನಡೆಯಲಿದೆ.
ಪೂರ್ವಜರು ಅನುಸರಿಸಿಕೊಂಡು ಬಂದಿದ್ದ ಗಾಣದಿಂದ ಎಣ್ಣೆ ತೆಗೆಯುವ ಪದ್ಧತಿಯು ಹೊಸ ಪೀಳಿಗೆಯ ಮನಸ್ಥಿತಿ, ವಾಣಿಜ್ಯೀಕರಣ ಇತ್ಯಾದಿಯಿಂದ ಬಹುತೇಕ ನಶಿಸಿಹೋಗಿದೆ. ಇನ್ನು ಎತ್ತನ್ನು ಬಳಸಿ ಗಾಣದಿಂದ ಎಣ್ಣೆ ತೆಗೆಯುವ ಹಲವೆಡೆ ಇನ್ನೂ ಉಳಿದುಕೊಂಡಿದೆ. ಅದನ್ನು ಉಳಿಸಿಕೊಳ್ಳುವ ಜೊತೆಗೆ ಮತ್ತಷ್ಟು ಮಂದಿ ಗಾಣದಿಂದ ಎಣ್ಣೆ ತೆಗೆಯುವ ನಿಟ್ಟಿನಲ್ಲಿ ನೆರವಾಗಲು ‘ದೇಸಿರಿ’ ಸಂಸ್ಥೆ ಜನವರಿ 31ರ ಭಾನುವಾರ ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿದೆ.
ಸಾಂಪ್ರದಾಯಿಕ ಎತ್ತಿನ ಗಾಣದಿಂದ ಎಣ್ಣೆ ತೆಗೆಯುವ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದೊಂದಿಗೆ ದೇಸಿರಿ ಪ್ರಾರಂಭಿಸಿರುವ ತರಬೇತಿ ಕಾರ್ಯಕ್ರಮ ಜನಮೆಚ್ಚುಗೆ ಪಡೆದಿದೆ. ಪ್ರಾಚೀನ ಮತ್ತು ಸಾಂಪ್ರದಾಯಿಕ ತೈಲ ಉತ್ಪಾದನೆಯನ್ನು ಭಾರತದ 6.5 ಲಕ್ಷ ಹಳ್ಳಿಗಳಲ್ಲೂ ಮರುಸ್ಥಾಪಿಸಿ ದೇಶದ ಪ್ರತಿಮನೆಯ ಅಡುಗೆ ಎಣ್ಣೆಯ ಅಗತ್ಯತೆಯನ್ನು ಹಳ್ಳಿಗಳಿಂದಲೇ ಪೂರೈಸುವುದು ದೇಸೀರಿಯ ಕನಸು. ಈ ಕನಸಿನ ಸಾಕಾರಕ್ಕೆ ದೇಸಿರಿ ಸಂಸ್ಥೆ ಬದ್ಧವಾಗಿದ್ದು ಅದಕ್ಕಾಗಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ಇದು ಈ ಸಂಸ್ಥೆಯ ಎರಡನೇ ಕಾರ್ಯಾಗಾರವಾಗಿರಲಿದೆ.
ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಹಳ್ಳಿಗಳಿಗೆ ಸುಸ್ಥಿರತೆ ಮತ್ತು ಸಮೃದ್ಧಿಯನ್ನು ತರುವ ಎತ್ತಿನ ಗಾಣದ ಎಣ್ಣೆ ತಯಾರಿಕೆಯನ್ನು ಪುನರುಜ್ಜೀವನಗೊಳಿಸುವ ಈ ಉದಾತ್ತ ಆಂದೋಲನದಲ್ಲಿ ತಮ್ಮೊಂದಿಗೆ ಭಾಗವಹಿಸಿ ಮತ್ತು ಎಣ್ಣೆ ತಯಾರಿಕೆ ವಿಧಾನವನ್ನು ಕಲಿಯಿರಿ ಎಂದು ಸಂಸ್ಥೆ ಮನವಿ ಮಾಡಿಕೊಂಡಿದೆ.
ಈ ಕಾರ್ಯಾಗಾರ 25 ಮಂದಿಗೆ ಸೀಮಿತವಾಗಿರಲಿದ್ದು, ಮೊದಲು ಬಂದ 25 ಜನ ಉತ್ಸಾಹಿ ಯುವ ಜನರಿಗೆ ಆದ್ಯತೆ ಇರುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿವರಣೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕಾರ್ಯಾಗಾರದ ಸ್ಥಳ: ದೇಸಿರಿ – ಮೊದಲನೇ ಘಟಕ, ಎಸ್.ಆರ್. ನ್ಯಾಚುರಲ್ ಫಾರ್ಮ್ಸ್, ಸರ್ಕಾರಿ ಪ್ರಾಥಮಿಕ ಶಾಲೆ ಹಿಂಭಾಗ, ಅಡಗನಹಳ್ಳಿ, ಬ್ಯಾಡರಹಳ್ಳಿ ಪೋಸ್ಟ್, ಕೆ.ಆರ್.ನಗರ, ಮೈಸೂರು ಜಿಲ್ಲೆ.
ನೋಂದಣಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ: