ಬೆಂಗಳೂರು: ಕೋವಿಡ್-19 ಸಂಕಷ್ಟದಲ್ಲಿ ಆತಂಕದ ನಡುವೆಯೂ ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮಿಸಿದ ಹಾಗೂ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಗಾಣಿಗ ಸಾಹು ಚೌಪಾಲ್ ಸಂಘಟನೆ ಹಮ್ಮಿಕೊಂಡಿದೆ. ಬದುಕು ಬೆಳಕು ಸೇವಾ ಸಮಿತಿ, ನಿವೃತ್ತ ಶಿಕ್ಷಕ ಕೆ. ಮಾಯಿಗಶೆಟ್ಟಿ ಸೇವಾ ಸಮಿತಿ, ಗಾಣಿಗ ಸಾಹು ಚೌಪಾಲ್ ಸಂಘಟನೆ ಮತ್ತು ಮಂಡ್ಯ ಉಪ ವಿಭಾಗ ಪೊಲೀಸ್ ಸಹಯೋಗದ ಈ ಕಾರ್ಯಕ್ರಮವು ಜನವರಿ 12ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮಂಡ್ಯದ ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಅವರ ಕಚೇರಿಯಲ್ಲಿ ನಡೆಯಲಿದೆ.
ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಮಂಡ್ಯ ಉಪ ವಿಭಾಗದ ಪೊಲೀಸರಿಗೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುವುದು.
ಮಂಡ್ಯ ಜಿಲ್ಲಾ ಭಾಜಪ ಮುಖಂಡ, ಬದುಕು ಬೆಳಕು ಸೇವಾ ಸಮಿತಿಯ ಅಧ್ಯಕ್ಷರೂ ಆಗಿರುವ ಎಚ್.ಆರ್. ಅರವಿಂದ್ ಉದ್ಘಾಟಿಸಲಿದ್ದಾರೆ. ಸನ್ಮಾನಿತರಾಗಲಿರುವ ಮಂಡ್ಯ ಜಿಲ್ಲಾ ಡಿವೈಎಸ್ಪಿ ಎಲ್. ನವೀನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಗಾಣಿಗ ಸಾಹು ಚೌಪಾಲ್ ಸಂಘಟನೆ ರಾಜ್ಯಾಧ್ಯಕ್ಷ ಎಂ. ಲೋಕೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಮಂಡ್ಯದ ಸವಿತಾ ಹೊಟೇಲ್ ಮಾಲೀಕರಾದ ಪ್ರೇಮಾ ಹಂದೆ ಅವರು ಮುಖ್ಯ ಅತಿಥಿಗಳಾಗಿ ಇರಲಿದ್ದಾರೆ. ಕಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕೆ.ಆರ್. ಅನಿಲ್ಕುಮಾರ್, ಮಂಡ್ಯದ ಸಮಾಜ ಸೇವಕ ಶೇಖರ್ (ಹೊಸಳ್ಳಿ) ಅವರನ್ನು ಸನ್ಮಾನಿಸಲಾಗುವುದು.