ಬೆಂಗಳೂರು: ಯಕ್ಷಗಾನದ ನಡುತಿಟ್ಟಿನ ಹಾರಾಡಿ ಶೈಲಿಯ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗರು ಪ್ರತಿಷ್ಠಿತ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಪ್ರಶಸ್ತಿ-2022ಕ್ಕೆ ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿಯ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ ಅವರನ್ನು ಒಳಗೊಂಡ ಪ್ರಶಸ್ತಿ ಸಮಿತಿಯು ಈ ಆಯ್ಕೆಯನ್ನು ಘೋಷಿಸಿದೆ.
ಕುಂದಾಪುರ ಸಮೀಪದ ಕೋಟದ ಪಟೇಲರ ಮನೆಯಂಗಣದಲ್ಲಿ 2022ರ ಫೆಬ್ರವರಿ 2ರಂದು ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವನಾಥ ಗಾಣಿಗರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಾಲಿಗ್ರಾಮ ಮಕ್ಕಳ ಮೇಳದ ಟ್ರಸ್ಟ್ ಕಾರ್ಯದರ್ಶಿ ಸುಜಯೀಂದ್ರ ಹಂದೆ ತಿಳಿಸಿದ್ದಾರೆ.
ವಿಶ್ವನಾಥ ಗಾಣಿಗರು ಹಳೆಯ ಹಾಗೂ ಹೊಸ ಪ್ರಸಂಗಗಳಲ್ಲೂ ತಮ್ಮ ಕಲಾಪ್ರದರ್ಶನ ಮಾಡಿದ್ದು, ಹಿತ-ಮಿತವಾದ ಮಾತು, ಗತ್ತಿನ ಕುಣಿತಗಳಿಂದ ಆಟ-ಜೋಡಾಟದ ರಂಗಸ್ಥಳಗಳಲ್ಲಿ ವಿಜೃಂಭಿಸಿದ್ದಾರೆ. ಆಕರ್ಷಕ ಶರೀರ ಮತ್ತು ಶಾರೀರದ ಕೋಡಿಯವರು ರಂಗಸ್ಥಳದ ಕಳೆಯನ್ನು ಹೆಚ್ಚಿಸುವಂತೆ ಅಭಿನಯ ಸಾಮರ್ಥ್ಯ ಮೆರೆದವರು.
ಇವರು ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ ಬಳಿಕ ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು ಮೇಳಗಳಲ್ಲಿ ಕರ್ಣ, ಜಾಂಬವ, ಅರ್ಜುನ, ಶಲ್ಯ, ರಾವಣ, ಕಂಸ, ಶೂರಸೇನ, ಈಶ್ವರ ಕಾಲನೇಮಿ, ಶುಂಭ, ಮಧುಕೈಟಭ, ಅತಿಕಾಯ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರು, ಅಟ್ಟೆ ಮುಂಡಾಸು ಕಟ್ಟುವುದರಲ್ಲಿ ದಾಖಲೆಯನ್ನೂ ನಿರ್ಮಿಸಿದ್ದಾರೆ.
ಕಾರ್ಕಡ ಶ್ರೀನಿವಾಸ ಉಡುಪರು ಸಾಹಿತಿ, ರಂಗನಟ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ. ಮಾತ್ರವಲ್ಲ, ಇವರು ಯಕ್ಷಗಾನವನ್ನು ಮೊದಲ ಸಲ ವಿದೇಶಕ್ಕೆ ಕರೆದೊಯ್ದ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರು.
ಸಂಬಂಧಿತ ಸುದ್ದಿ: ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗ, ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸನ್ಮಾನ
ಸಂಬಂಧಿತ ಸುದ್ದಿ: ಯಕ್ಷಗಾನ ಕಲಾವಿದ ಕೃಷ್ಣ ಗಾಣಿಗರಿಗೆ ಪಡ್ರೆ ಚಂದು ಪ್ರಶಸ್ತಿ ಪ್ರದಾನ
ಸಂಬಂಧಿತ ಸುದ್ದಿ: ಮಕ್ಕಳಿಗೆಂದೇ ಯಕ್ಷಗಾನ ಕಲಿಕಾ ತರಬೇತಿ ಕೇಂದ್ರ ಉದ್ಘಾಟನೆ