ಬೆಂಗಳೂರು: ಗಾಣಿಗ ಸಮಾಜದ ಸಾಕಷ್ಟು ಚಟುವಟಿಕೆಗಳ ಮೂಲಕ ಈಗಾಗಲೇ ಸಮಾಜದ ಹಲವರ ಗಮನ ಸೆಳೆದಿರುವ ಕುಮಟಾ ಗಾಣಿಗ ಯುವ ಬಳಗ (ರಿ.) ಪಾಲಿಗೆ ಈ ಹೊಸ ವರ್ಷ ಹೊಸ ಹರ್ಷದೊಂದಿಗೆ ಆರಂಭವಾಗಲಿದೆ. ಏಕೆಂದರೆ, ಯುವಬಳಗದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವೊಂದು 2022ರ ಆರಂಭದಲ್ಲೇ ಕಾರ್ಯಗತವಾಗಲಿದೆ.
ಅಂದರೆ.. ಈ ಹಿಂದೆ ಕಾರಣಾಂತರದಿಂದ ಮುಂದೂಡಲ್ಪಟ್ಟಿದ್ದ ಗಾಣಿಗ ಯುವ ಬಳಗದ ವಿಧ್ಯುಕ್ತ ಉದ್ಘಾಟನೆ ಸಮಾರಂಭ ಕುಮಟಾ ಚಿತ್ರಗಿಯಲ್ಲಿರುವ ಶ್ರೀರಾಮಚಂದ್ರ ಸಭಾಭವನದಲ್ಲಿ ಜ. 9ರ ರವಿವಾರ ನಡೆಯಲಿದೆ.
ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ, ಗಾಣಿಗ ಸಮಾಜದವರೇ ಆಗಿರುವ ಕೆ.ದಿನಕರ ಶೆಟ್ಟಿ ಅವರು ಈ ಯುವ ಬಳಗವನ್ನು ಉದ್ಘಾಟಿಸಲಿರುವುದು ಮತ್ತೊಂದು ಸಂತೋಷದ ವಿಷಯ. ಗಾಣಿಗ ಸಮಾಜದ ಇನ್ನೊಬ್ಬ ರಾಜಕಾರಣಿ, ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ.ನರಸಿಂಹ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಇಂಡಿಯಾಕಾಸ್ಟ್ನ ಅಸೋಸಿಯೇಟ್ ಡೈರೆಕ್ಟರ್ ಎ.ಪಿ.ಗಿರೀಶ್ ಅವರು ಇದೇ ಸಂದರ್ಭದಲ್ಲಿ ಯುವಬಳಗದ ವೆಬ್ಸೈಟ್ ಲೋಕಾರ್ಪಣೆ ಮಾಡಲಿದ್ದಾರೆ.
ಕುಮಟಾ ಶ್ರೀರಾಮಚಂದ್ರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಾ.ವಿ.ಜಿ. ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾಸಂಘದ ಅಧ್ಯಕ್ಷ ದಾಮೋದರ ಕೆ. ಶೆಟ್ಟಿ, ಚಿತ್ರಗಿ ಶ್ರೀರಾಮಚಂದ್ರ ದೇವಸ್ಥಾನದ ಮೊಕ್ತೇಸರ ರತ್ನಾಕರ ಎಸ್. ಶೆಟ್ಟಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಸಿ. ಕಲ್ಮನೆ, ಆರ್ಥೊಪೆಡಿಕ್ ಸರ್ಜನ್ ಡಾ. ಶರತ್ ಬಾಳೆಮನೆ, ಹೊಸಾಕುಳಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ ಶೆಟ್ಟಿ, ಗೋಕರ್ಣ ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಮಹೇಶ ಜಿ. ಶೆಟ್ಟಿ, ಉದ್ಯಮಿಗಳಾದ ಲೋಕೇಶ ಜಿ. ಶೆಟ್ಟಿ ಹಾಗೂ ಬೈಂದೂರು ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಕಾಯ್ಕಿಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂದು ಬೆಳಗ್ಗೆ 9-30ರಿಂದ ಗಾಣಿಗ ಸಮಾಜ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ 11-30ರ ಸುಮಾರಿಗೆ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮ ನಡೆಯಲಿದೆ. ಎಸ್ಎಸ್ಎಲ್ಸಿ-ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಗಾಣಿಗ ಸಮಾಜದ ನಿವೃತ್ತ ಸೈನಿಕರಿಗೆ ಸನ್ಮಾನ ಮಾಡುವಂಥ ವಿಶೇಷ ಕಾರ್ಯಕ್ರಮವನ್ನೂ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾಜ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯುವ ಬಳಗದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂಬುದಾಗಿ ಗಾಣಿಗ ಬಳಗದ ಗೌರವಾಧ್ಯಕ್ಷ ಗಣಪತಿ ಶೆಟ್ಟಿ ಮತ್ತು ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ ವಿನಂತಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕೋವಿಡ್-19 ತಡೆ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಕೋರಿಕೊಂಡಿದ್ದಾರೆ.
ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ
ಸಂಬಂಧಿತ ಸುದ್ದಿ: ಗಾಣಿಗ ಸಮಾಜಕ್ಕೂ ನಿಗಮ ಸ್ಥಾಪಿಸಿ; ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ
ಸಂಬಂಧಿತ ಸುದ್ದಿ: ದೊಡ್ಮನೆ ಹುಡುಗ್ರಿಗೆ ಗಾಣಿಗ ಪ್ರೀಮಿಯರ್ ಕಪ್, ಕುಮಟಾ ಚಾಲೆಂಜರ್ಸ್ಗೆ ರನ್ನರ್ ಅಪ್