ಬೆಂಗಳೂರು: ಗಾಣಿಗ ನಿಗಮ-ಮಂಡಳಿ ರಚನೆ ವಿಚಾರವಾಗಿ ಇಟ್ಟ ಬೇಡಿಕೆಗೆ ಸ್ಪಂದಿಸಿದಂತೆ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಅಧಿವೇಶನದಲ್ಲಿ ನೀಡಿರುವ ಪ್ರತಿಕ್ರಿಯೆ ಗಾಣಿಗ ಸಮುದಾಯದ ಮುಖಂಡರನ್ನು ಬೇಸರಕ್ಕೀಡು ಮಾಡಿದೆ. ಮಾತ್ರವಲ್ಲ, ಈ ಬಗ್ಗೆ ಗಾಣಿಗ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದು, ಹೋರಾಟ ನಡೆಸಲು ಕೂಡ ಚಿಂತನೆ ನಡೆಸುತ್ತಿದ್ದಾರೆ.
ಗಾಣಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ-ಮಂಡಳಿ ರಚನೆ ಮಾಡಬೇಕು ಎಂದು ಕುಮಟಾ-ಹೊನ್ನಾವರ ಶಾಸಕ ಕೆ.ದಿನಕರ ಶೆಟ್ಟಿ ಹಾಗೂ ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಅವರು ನಿನ್ನೆ ಅಧಿವೇಶನದಲ್ಲಿ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ಸದ್ಯ ಹೊಸ ನಿಗಮ-ಮಂಡಳಿ ಮಾಡುವ ಚಿಂತನೆ ಸರ್ಕಾರ ಮುಂದಿಲ್ಲ. ಅಂಥ ಅನನುಕೂಲವಿದ್ದರೆ ದೇವರಾಜ ಅರಸು ನಿಗಮದ ಮೂಲಕ ಅಗತ್ಯ ಸೌಲಭ್ಯ ಪಡೆದುಕೊಳ್ಳಿ ಎಂದು ಉತ್ತರಿಸುವ ಮೂಲಕ ಗಾಣಿಗ ನಿಗಮ-ಮಂಡಳಿ ರಚನೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ.
ಸಚಿವ ಕಾರಜೋಳ ಅವರು ಹೀಗೆ ಏಕಾಏಕಿ ಬೇಡಿಕೆಯನ್ನು ತಳ್ಳಿಹಾಕಿರುವುದು ಗಾಣಿಗ ಸಮುದಾಯದವರ ಬೇಸರಕ್ಕೆ ಕಾರಣವಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಗಾಣಿಗ ಸಮುದಾಯದ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.
ಕಾಯಕ ಸಮಾಜಗಳಲ್ಲಿ ಒಂದಾದ ಬಹಳ ಹಿಂದುಳಿದ ಗಾಣಿಗ ಸಮಾಜ ಸಹಸ್ರಾರು ವರ್ಷಗಳಿಂದ ಗಾಣದಿಂದ ಎಣ್ಣೆ ತೆಗೆದು ತನ್ನ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದೆ. ವಿದೇಶಗಳಿಂದ ಆಮದಾಗುತ್ತಿರುವ ವಿಷಮಿಶ್ರಿತ ಕಲಬೆರಕೆ ಎಣ್ಣೆ ಮಾರುಕಟ್ಟೆಯಿಂದ ಗಾಣಿಗ ವೃತ್ತಿ ಕುಸಿದಿದೆ. ಅದಾಗ್ಯೂ ಗಾಣಿಗ ಸಮಾಜಕ್ಕೆ ನ್ಯಾಯ ಸಿಗಬಹುದೆಂದು ಕೆಲವು ವರ್ಷಗಳಿಂದ ಗಾಣಿಗ-ನಿಗಮ ಮಂಡಳಿ ನೀಡುವಂತೆ ಬೇಡಿಕೆ ಸಲ್ಲಿಸುತ್ತ ಬರಲಾಗಿದೆ. ಅದೇ ರೀತಿ ನಿನ್ನೆ ವಿಧಾನಮಂಡಲದ ಅಧಿವೇಶನಲ್ಲಿ ಶಾಸಕರಿಬ್ಬರು ಇಟ್ಟ ಗಾಣಿಗ ನಿಗಮ-ಮಂಡಳಿ ರಚನೆಯ ಬೇಡಿಕೆಯನ್ನು ಗೋವಿಂದ ಕಾರಜೋಳ ಅವರು ಏಕಾಏಕಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ. ಈ ಸಂಬಂಧ ನಾವು ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಅಖಿಲ ಕರ್ನಾಟಕ ಗಾಣಿಗ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜೆ.ಎನ್. ರಮೇಶ್ ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ
ಸಂಬಂಧಿತ ಸುದ್ದಿ: ಗಾಣಿಗರ ನಿಯೋಗದಿಂದ ಸಿಎಂ ಭೇಟಿ, ನಿಗಮ-ಮಂಡಳಿ ಸ್ಥಾಪಿಸುವಂತೆ ಮನವಿ
ಸಂಬಂಧಿತ ಸುದ್ದಿ: ಕೇಂದ್ರ ಸಚಿವರಲ್ಲಿ ಗಾಣಿಗ ನಿಗಮ-ಮಂಡಳಿ ಬೇಡಿಕೆ ಇಟ್ಟ ಮುಖಂಡರು