ಬೆಂಗಳೂರು: ಗಾಣಿಗ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ ಬದಲು ಅತಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಅಗತ್ಯವಿದೆ ಎಂದು ಬಿಹಾರದ ಸೀತಾಮಡಿ ಲೋಕಸಭಾ ಕ್ಷೇತ್ರದ ಸದಸ್ಯ ಸುನೀಲ್ಕುಮಾರ್ ಪಿಂಟು ಅಭಿಪ್ರಾಯಪಟ್ಟಿದ್ದಾರೆ.
ಗಾಣಿಗ ಸಮಾಜದವರಾದ ಬಿಹಾರದ ಸೀತಾಮಡಿ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ಕುಮಾರ್ ಪಿಂಟು ತಮ್ಮ ಧರ್ಮಪತ್ನಿ ಮಂಜುದೇವಿ ಸಮೇತರಾಗಿ ಬೆಂಗಳೂರಿಗೆ ಆಗಮಿಸಿದ್ದು, ಇವರನ್ನು ಅಖಿಲ ಕರ್ನಾಟಕ ಗಾಣಿಗ ಮಹಾಸಭಾದ ಪದಾಧಿಕಾರಿಗಳು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ವಾಗತ ಮಾಡಿಕೊಂಡರು.
ಬಳಿಕ ಪಿಂಟು ದಂಪತಿ ಗಾಣಿಗ ಸಮಾಜದವರೇ ಆದ ಐಎಎಸ್ ಅಧಿಕಾರಿ ವಾಸಂತಿ ಅಮರ್ನಾಥ್ ಹಾಗೂ ಸಮಾಜ ಸೇವಕ ಜಿ.ಎಸ್. ಅಮರ್ನಾಥ್ ಅವರ ನಿವಾಸಕ್ಕೆ ಭೇಟಿಕೊಟ್ಟು ಮಾತುಕತೆ ನಡೆಸಿ, ಹಲವಾರು ವಿಚಾರಗಳ ವಿನಿಮಯ ಮಾಡಿಕೊಂಡರು. ಅಲ್ಲದೆ ನಗರ ದೇವತೆಯಾದ ಶ್ರೀಅಣ್ಣಮ್ಮ ದೇವಿ ದೇವಸ್ಥಾನಕ್ಕೂ ತೆರಳಿ, ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ಬಿಹಾರದಲ್ಲಿ ಗಾಣಿಗರನ್ನು ಅತಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಸಹ ನಮ್ಮ ಸಮುದಾಯವನ್ನು ಒಬಿಸಿ ಬದಲು ಎಮ್ಬಿಸಿ ಅಂದರೆ ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕಾದ ಅಗತ್ಯವಿದೆ. ಆ ಕುರಿತು ನಿಮ್ಮ ಮನವಿಯನ್ನು ಸರ್ಕಾರಕ್ಕೆ ನೀಡಿ, ನಾನು ಸಹ ನಿಮಗೆ ಬೆಂಬಲವಾಗಿರುತ್ತೇನೆ ಎಂದು ಸುನೀಲ್ಕುಮಾರ್ ಪಿಂಟು ಭರವಸೆ ನೀಡಿದರು.
ಸುನೀಲ್ಕುಮಾರ್ ಅವರು ಬಿಹಾರದ ಸೀತಾಮಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು ಹಾಗೂ ಬಿಹಾರದ ಸಚಿವರಾಗಿಯೂ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಗಾಣಿಗ ಸಮುದಾಯಕ್ಕೂ ಬೆಂಬಲವಾಗಿದ್ದಾರೆ. ಇವರು ಸೀತಾಮಡಿ ಲೋಕಸಭಾ ಕ್ಷೇತ್ರದ ಸಂಸದರಾಗಿ 2019ರಲ್ಲಿ ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಜಿ.ಎಸ್. ಅಮರನಾಥ್, ಐಎಎಸ್ ಅಧಿಕಾರಿ ವಾಸಂತಿ ಅಮರ್ನಾಥ್, ಡಾ. ಶಶಿಧರ್, ಶಶಿಕುಮಾರ್, ಅಖಿಲ ಕರ್ನಾಟಕ ಗಾಣಿಗ ಮಹಾಸಭಾ ಅಧ್ಯಕ್ಷ ಎಂ. ಚಂದ್ರಶೇಖರ್, ಪ್ರಧಾನಕಾರ್ಯದರ್ಶಿ ಜೆ.ಎನ್. ರಮೇಶ್, ಸಂಘಟನಾ ಕಾರ್ಯದರ್ಶಿಗಳಾದ ಮುರುಗನ್, ರಾಜು, ದೇವರಾಜ್, ಶ್ರೀಧರ್, ಅರುಣ್, ಮೈಸೂರಿನ ವೆಂಕಟರಮಣ ಶೆಟ್ಟಿ, ಪುಟ್ಟಸ್ವಾಮಿ ಶೆಟ್ಟಿ ಹಾಗೂ ಗಾಣಿಗ ಸಮಾಜದ ಬಾಂಧವರನೇಕರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಬಿಹಾರ ವಿಧಾನಸಭಾ ಚುನಾವಣೆ; ಗೆಲುವಲ್ಲಿ ಇವರೇ ‘ಸಾಹು’ಕಾರರು…
ಸಂಬಂಧಿತ ಸುದ್ದಿ: ಉತ್ತರಾಖಂಡದ ಸಚಿವೆ ಆಗಿ ರೇಖಾ ಆರ್ಯ ಮತ್ತೆ ಪ್ರಮಾಣವಚನ ಸ್ವೀಕಾರ
ಸಂಬಂಧಿತ ಸುದ್ದಿ: ಅಖಿಲ ಭಾರತ ತೈಲಿಕ್ ಸಾಹು ಮಹಾಸಭಾ ಅಧ್ಯಕ್ಷೆ ಡಾ.ಮಮತಾ ಸಾಹುಗೆ ಸನ್ಮಾನ