ಬೆಂಗಳೂರು: ಕರ್ನಾಟಕ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ಸದ್ಯದಲ್ಲೇ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದು, ದಕ್ಷಿಣಕನ್ನಡ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮುಖಂಡರು ಅವರನ್ನು ಇತ್ತೀಚೆಗೆ ಭೇಟಿಯಾಗಿ ಶುಭ ಹಾರೈಸಿದರು.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಮೇ 1ರಂದು ರಾಜೀನಾಮೆ ಸಲ್ಲಿಸಲಿರುವ ಪುಟ್ಟಸ್ವಾಮಿ, ಮೇ 6ರಂದು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಬಳಿಕ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ದಾಸನಪುರ ಹೋಬಳಿಯ ನಗರೂರು ಗ್ರಾಮದ ಬಡಾವಣೆಯಲ್ಲಿರುವ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಪ್ರಥಮ ಪೀಠಾಧಿಪತಿ ಮೇ 15ರಂದು ಪೀಠಾರೋಹಣ ಮಾಡಲಿದ್ದಾರೆ.
ಈ ಮಠವನ್ನು ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್ (ರಿ.) ಮೂಲಕ ಪುಟ್ಟಸ್ವಾಮಿಯವರೇ ಸ್ಥಾಪಿಸಿದ್ದರು. ಮೇ 15ರಂದು ಬಿ.ಜೆ. ಪುಟ್ಟಸ್ವಾಮಿ ಅವರು ಶ್ರೀಪೂರ್ಣಾನಂದಪುರಿ ಸ್ವಾಮೀಜಿ ಆಗಿ ಪೀಠಾರೋಹಣ ಮಾಡಿ ಗಾಣಿಗ ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ತೊಡಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರನ್ನು ಮೂಲತಃ ಕರಾವಳಿ ಭಾಗದ ಗಾಣಿಗ ಸಮಾಜದ ಮುಖಂಡರು ಭೇಟಿಯಾಗಿ ಶುಭ ಹಾರೈಸಿದರು. ಪುಟ್ಟಸ್ವಾಮಿ ಅವರ ಮಿತ್ರರಾಗಿದ್ದ ಬೆಂಗಳೂರಿನ ಸೀ ರಾಕ್ ಹೋಟೆಲ್ ಮಾಲೀಕ ಜನಾರ್ದನ ರಾವ್ ಅವರ ಪುತ್ರ, ಉದ್ಯಮಿ ರಮೇಶ್ ಜೆ. ರಾವ್, ದಕ್ಷಿಣಕನ್ನಡ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಸಂತೋಷ್ ಕೋಡಿ, ನ್ಯೂಟ್ರಿಸುಖಾನ್ ಬಯೋಟೆಕ್ ಪ್ರೈ. ಲಿ. ಸಂಸ್ಥಾಪಕ ಡಾ. ರಾಘವ್ ಶೆಟ್ಟಿ, ಉದ್ಯಮಿ ರಾಘವೇಂದ್ರ ರಾವ್ ಅವರು ಪುಟ್ಟಸ್ವಾಮಿ ಅವರನ್ನು ಭೇಟಿಯಾಗಿ, ಅಭಿನಂದಿಸಿ, ಶುಭ ಹಾರೈಸಿದರು. ರಾಜಕಾರಣಿಯಾಗಿ ಗಾಣಿಗ ಸಮಾಜಕ್ಕೆ ಮಾಡಿದ್ದ ಸೇವೆ ಮುಂದೆ ಸ್ವಾಮೀಜಿಯಾಗಿಯೂ ಮುಂದುವರಿಸಲಿದ್ದು, ಸಮಾಜಕ್ಕಾಗಿ ತಮ್ಮ ಸಹಾಯ-ಸಹಕಾರ ಸದಾ ಇರುವುದಾಗಿ ಪುಟ್ಟಸ್ವಾಮಿ ಭರವಸೆ ನೀಡಿದರು.
ಸಂಬಂಧಿತ ಸುದ್ದಿ: ಪುಟ್ಟ ಸ್ವಾಮಿಯನ್ನು ಕೂರಿಸಲು ಹೋಗಿ ತಾವೇ ಪೂರ್ಣ ಸ್ವಾಮಿ ಆಗಿದ್ದೇಕೆ?
ಸಂಬಂಧಿತ ಸುದ್ದಿ: ಸೀ ರಾಕ್ ಜನಾರ್ದನ ಅವರ ಸ್ಮರಣಾರ್ಥ ಶಾಶ್ವತ ದತ್ತಿನಿಧಿಗೆ 2 ಲಕ್ಷ ರೂಪಾಯಿ ದೇಣಿಗೆ
ಸಂಬಂಧಿತ ಸುದ್ದಿ: ಗಾಣಿಗ ಸಮುದಾಯ ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಲಿ: ಬಿಹಾರ ಸಂಸದ ಪಿಂಟು