ಬೆಂಗಳೂರು: ಗಾಣಿಗ ಸಮುದಾಯಕ್ಕೆಂದೇ ಪ್ರತ್ಯೇಕ ನಿಗಮ-ಮಂಡಳಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಸಮಾಜದ ಹಿರಿಯರು-ಮುಖಂಡರು ಸೇರಿ ಜುಲೈ 4ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶಾಂತಿಯುತ ಧರಣಿ ನಡೆಸಿದರು.
ಹಿಂದುಳಿದ ಸಮಾಜವಾಗಿರುವ ಗಾಣಿಗ ಸಮುದಾಯಕ್ಕೂ ಇತರ ಸಮುದಾಯಗಳಿಗೆ ನೀಡಿದಂತೆ ಪ್ರತ್ಯೇಕ ನಿಗಮ-ಮಂಡಳಿ ರಚನೆ ಮಾಡಬೇಕು ಎಂಬುದು ಬಹುಕಾಲದ ಬೇಡಿಕೆ. ಇದು ಇದೇ ಫೆಬ್ರವರಿಯಂದು ವಿಧಾನಸಭಾ ಅಧಿವೇಶನದಲ್ಲಿ ಶಾಸಕರಾದ ಸಿದ್ದು ಆನಂದ ನ್ಯಾಮಗೌಡ ಹಾಗೂ ಕೆ.ದಿನಕರ ಶೆಟ್ಟಿಯವರು ಪ್ರಸ್ತಾಪಿಸಿದ್ದರಿಂದ ಮತ್ತೆ ಮುನ್ನೆಲೆಗೆ ಬಂದಿತ್ತು. ಅಂದು ಶಾಸಕದ್ವಯರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ಗಾಣಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ-ಮಂಡಳಿ ಕೊಡಲು ಸಾಧ್ಯವಿಲ್ಲ ಎಂದಿದ್ದರು.
ಸರ್ಕಾರದ ಈ ನಿರ್ಲಕ್ಷ್ಯದ ವಿರುದ್ಧ ಅಂದೇ ಪ್ರತಿಭಟನೆಯ ದನಿ ಎದ್ದಿದ್ದು, ಈ ವಿಚಾರವಾಗಿ ಮೇಲಿಂದ ಮೇಲೆ ಅಸಮಾಧಾನ ವ್ಯಕ್ತವಾಗುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ನಿನ್ನೆ ಮತ್ತೊಂದು ಧರಣಿ ನಡೆದಿದ್ದು, ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ಸ್ಥಾಪನೆ ಮಾಡಲೇಬೇಕು ಎಂದು ಸಮಾಜಬಾಂಧವರು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ವಿಜಯಪುರ ಕೊಲ್ಹಾರದ ಶ್ರೀದಿಗಂಬರೇಶ್ವರ ಸಂಸ್ಥಾನದ ಕಲ್ಲಿನಾಥ ಸ್ವಾಮೀಜಿ, ಗಾಣಿಗ ಯುವ ಮುಖಂಡ ಯತೀಶ್ಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.
ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ
ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ
ಸಂಬಂಧಿತ ಸುದ್ದಿ: ಗಾಣಿಗರ ನಿಯೋಗದಿಂದ ಸಿಎಂ ಭೇಟಿ, ನಿಗಮ-ಮಂಡಳಿ ಸ್ಥಾಪಿಸುವಂತೆ ಮನವಿ