ಬೆಂಗಳೂರು: ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ (ಸಿಆರ್ಡಬ್ಲ್ಯುಎ), ವಿಜಯವಾಣಿ-ದಿಗ್ವಿಜಯ ಸುದ್ದಿವಾಹಿನಿ, ಅಖಿಲ ಕರ್ನಾಟಕ ಮಕ್ಕಳ ಕೂಟ ಜಂಟಿಯಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಣೆ ಮಾಡಿವೆ.
ಚಾಮರಾಜಪೇಟೆಯ ಮಕ್ಕಳ ಕೂಟದ ಆವರಣದಲ್ಲಿ ಆಗಸ್ಟ್ 15ರಂದು ಬೆಳಗ್ಗೆ ಧ್ವಜಾರೋಹಣ ನಡೆಸಿ, ಪಥಸಂಚಲನ ಮತ್ತು ದೇಶಭಕ್ತಿಯ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಣೆ ಮಾಡಲಾಯಿತು. ನಿವೃತ್ತ ಕಮಾಂಡರ್ ಶ್ರೀಕಾಂತ್ ಧ್ವಜಾರೋಹಣ ಮಾಡಿದರು. ಮಕ್ಕಳು ಭಕ್ತಿಗೀತೆ ಮತ್ತು ಮಾಜಿ ಯೋಧರು ದೇಶಭಕ್ತಿ ಗೀತೆ ಹಾಡಿದರು.
ಮಕ್ಕಳಕೂಟದಲ್ಲಿ ನಡೆದ ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿವೃತ್ತ ಕಮಾಂಡರ್ ಶ್ರೀಕಾಂತ್, ವಿಜಯವಾಣಿ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ, ಗಾಣಿಗ ಸಮಾಜದ ಮುಖಂಡ, ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಆಗಿರುವ ಬಿ.ಎಸ್. ಸುಬ್ಬಣ್ಣ, ಉಪಾಧ್ಯಕ್ಷ ಡಾ.ಕೃಷ್ಣಮೂರ್ತಿ, ಡಾ. ಪ್ರಕಾಶ್, ರುಕ್ಮಾಂಗದ, ಸತೀಶ್, ರಾಧಾನಂದನ್, ಖಾಸಿಂ, ಬ್ಯಾಡ್ಮಿಂಟನ್ ಶಿವಣ್ಣ, ರವಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಲಕ್ಷಾಂತರ ಹೋರಾಟಗಾರರನ್ನು ನೆನೆಯುವ ದಿನವಿದು. ಸುಲಭವಾಗಿ ಸ್ವಾತಂತ್ರ್ಯ ಲಭಿಸಿಲ್ಲ. ಇದರ ಹಿಂದೆ ಲಕ್ಷಾಂತರ ಹೋರಾಟಗಾರರ ತ್ಯಾಗ-ಬಲಿದಾನವಿದೆ. ಇಂದು ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದೇವೆ. ದೇವರಿಗೆ ಕೊಡುವಂತೆ ರಾಷ್ಟ್ರಧ್ವಜಕ್ಕೂ ಗೌರವ ಸಲ್ಲಿಸಬೇಕು ಎಂದು ಸಿಆರ್ಡಬ್ಲ್ಯುಎ ಉಪಾಧ್ಯಕ್ಷ ಡಾ. ಕೃಷ್ಣಮೂರ್ತಿ ತಿಳಿಸಿದರು.
ಅಮೃತ ಮಹೋತ್ಸವ ಸಂಭ್ರಮಿಸಿ ಮರೆತು ಬಿಡುವ ಆಚರಣೆ ಆಗಬಾರದು, ಇದು ಅನವರತ ನಡೆಯಬೇಕು. ನಮ್ಮ ಮನೆ ಮನದಲ್ಲಿ ಈ ಸಂಭ್ರಮ ಸದಾ ಇರಬೇಕು. ನಮ್ಮ ಆಲೋಚನೆ, ವಿವೇಚನೆ, ಆಚಾರ, ವಿಚಾರ, ನಡೆ-ನುಡಿಗಳಲ್ಲಿ ಸ್ವಂತಿಕೆ ಮತ್ತು ಸ್ವತಂತ್ರತೆ ಇರಬೇಕು ಎಂದು ವಿಜಯವಾಣಿ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ ಹೇಳಿದರು.
ಚಾಮರಾಜಪೇಟೆಯ ನಾಗರಿಕರು, ನಡಿಗೆದಾರರ ಸಂಘದ ಸದಸ್ಯರು, ವ್ಯಾಯಾಮ ತಂಡದವರು ಮತ್ತು ವರ್ತಕರು ಮಕ್ಕಳ ಕೂಟದ ಆವರಣದಲ್ಲಿ ಪಥಸಂಚಲನ ಮಾಡಿದರು. ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದ ಹಲವು ಸಾರ್ವಜನಿಕರು ಕೂಡ ಭಾರತಾಂಬೆಗೆ ಜೈಕಾರ ಹಾಕುತ್ತ ಪಥ ಸಂಚಲನದಲ್ಲಿ ಭಾಗಿಯಾಗಿದ್ದು ಗಮನ ಸೆಳೆಯಿತು.
ಸಂಬಂಧಿತ ಸುದ್ದಿ: ಚಾಮರಾಜಪೇಟೆ ಸಮಸ್ಯೆ ಪರಿಹಾರ; ಸಿಆರ್ಡಬ್ಲ್ಯುಎ ಪಾತ್ರ ಮಹತ್ತರ
ಸಂಬಂಧಿತ ಸುದ್ದಿ: ಬಿಬಿಎಂಪಿ ಸಭೆಯಲ್ಲಿ ಸಿಆರ್ಡಬ್ಲ್ಯುಎ ಪದಾಧಿಕಾರಿಗಳ ಚರ್ಚೆ
ಸಂಬಂಧಿತ ಸುದ್ದಿ: ಶಾಸಕರನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ ಸಿಆರ್ಡಬ್ಲ್ಯುಎ