ಬೆಂಗಳೂರು: ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ರಚಿಸಬೇಕು ಎಂದು ಕಳೆದ ಕೆಲವು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರೂ ಬೇಡಿಕೆ ಈಡೇರಲಿಲ್ಲ. ಅದಾಗ್ಯೂ ಈ ಕುರಿತು ಗಾಣಿಗರು ದನಿ ಎತ್ತುತ್ತಲೇ ಇದ್ದು ಚುನಾವಣಾಪೂರ್ವದಲ್ಲಿ ಇದೀಗ ಆ ಧ್ವನಿ ಮತ್ತಷ್ಟು ತೀವ್ರಗೊಂಡಿದೆ. ಮಾತ್ರವಲ್ಲ, ಈ ಹೋರಾಟಕ್ಕೆ ಈಗ ಸೋಮಕ್ಷತ್ರಿಯರೂ ಜೊತೆಯಾಗಿದ್ದಾರೆ. ಅರ್ಥಾತ್, ಕರಾವಳಿ ಪ್ರದೇಶದ ಗಾಣಿಗರೂ ಇದಕ್ಕೆ ದನಿಗೂಡಿಸಿದ್ದು, ಇಂದು ಉಡುಪಿಯಲ್ಲಿ ವಿಶೇಷ ಸಭೆ ಹಮ್ಮಿಕೊಳ್ಳಲಾಗಿದೆ.
ಕರಾವಳಿ ಭಾಗದ ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾದ ಉಡುಪಿ ಜಿಲ್ಲೆಯ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಇಂದು (ಜ.9) ಸಂಜೆ 5 ಗಂಟೆಗೆ ಈ ಸಭೆ ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಗೆ ವಿಜಯಪುರದ ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಸ್ವಾಮೀಜಿ, ಶಿಗಮೊಗ್ಗ ಗಾಣಿಗ ಸಂಘದ ಎಚ್. ಸುಬ್ಬಯ್ಯ, ರಾಜ್ಯ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶರಣಪ್ಪ ನಾಗೋಜಿ ಆಗಮಿಸಲಿದ್ದಾರೆ.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ರಚನೆ ಆಗುವಂತೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತ ರೂಪು-ರೇಷೆಗಳು ನಡೆಯಲಿವೆ. ಗಾಣಿಗ ನಿಗಮ-ಮಂಡಳಿಗಾಗಿ ಸದ್ಯದಲ್ಲೇ ನಡೆಯಲಿರುವ ರಾಜ್ಯಮಟ್ಟದ ಬೃಹತ್ ಗಾಣಿಗ ಸಮಾವೇಶದ ಪೂರ್ವಭಾವಿ ಸಮಾಲೋಚನೆಯೂ ಇದಾಗಿರಲಿದ್ದು, ಪ್ರತ್ಯೇಕ ನಿಗಮ-ಮಂಡಳಿಯ ಅಗತ್ಯ ಹಾಗೂ ಅನುಕೂಲಗಳ ಕುರಿತು ಕೂಡ ಇಲ್ಲಿ ಮಾಹಿತಿ ವಿನಿಮಯ ನಡೆಯಲಿದೆ. ಅಲ್ಲದೆ ಸರ್ಕಾರ ಗಾಣಿಗ ಸಮುದಾಯದ ಈ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ಹೋರಾಟದ ಕುರಿತೂ ಈ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.
ಇಂದು ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಕುಂದಾಪುರ, ಉಡುಪಿ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು ಮತ್ತು ಸುತ್ತಮುತ್ತಲ ಭಾಗದ ಗಾಣಿಗ ಸಮಾಜದ ಗಣ್ಯರು ಭಾಗವಹಿಸಲಿದ್ದು, ಗಾಣಿಗ ಸಮಾಜಬಾಂಧವರು ಹೆಚಿನ ಸಂಖ್ಯೆಯಲ್ಲಿ ಈ ಸಭೆಗೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ನೂತನ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ
ಸಂಬಂಧಿತ ಸುದ್ದಿ: ಪಡುಕೋಣೆ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ರಿಷಿತಾ-ಲಮ್ಯಾ ರನ್ನರ್ ಅಪ್