ಬೆಂಗಳೂರು: ‘ಒಳ್ಳೆಯದು ಮಾಡಿ, ಒಳ್ಳೆಯದಾಗುತ್ತದೆ’ ಎಂಬ ಮಾತಿದೆ. ಆದರೆ ಇವರು ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ‘ಒಳ್ಳೆಯದಾಗಿದೆ, ಒಳ್ಳೆಯದು ಮಾಡಿ..’ ಎಂದು ಒಂದೊಳ್ಳೆಯ ಕೆಲಸಕ್ಕೆ ಪ್ರೇರೇಪಣೆ ನೀಡುತ್ತಿದ್ದಾರೆ. ಹೀಗೆ ಒಳಿತು ಮಾಡುವಂತೆ ಉತ್ತೇಜಿಸುತ್ತಿರುವ ಈ ಸಜ್ಜನರ ಸಜ್ಜನಿಕೆಯ ಕಾರ್ಯ ಈಗ ಮೆಚ್ಚುಗೆಗೂ ಪಾತ್ರವಾಗಿದೆ.
ಅದರಲ್ಲೂ ಬೇರೆ ಭಾಷೆಯ ನಾಡಿನಲ್ಲಿದ್ದರೂ ತನ್ನೂರಿನ ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಮೂಲಕ ಇವರು ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆ ಈ ಸಜ್ಜನರು ಬೇರೆ ಯಾರೂ ಅಲ್ಲ.. ತೆಲಂಗಾಣದ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್.
ಕನ್ನಡಿಗರು ಹಾಗೂ ನಮ್ಮ ಗಾಣಿಗ ಸಮಾಜದವರಾಗಿರುವ ವಿಶ್ವನಾಥ ಸಿ. ಸಜ್ಜನರ್ ಅವರು ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಪ್ಲಾಸ್ಮಾದಾನ ಜಾಗೃತಿಗಾಗಿ ತಮ್ಮ ಇಲಾಖೆ ಮೂಲಕ ಗೀತೆಯೊಂದನ್ನು ಪ್ರಸ್ತುತಿ ಪಡಿಸಿದ್ದಾರೆ. ವಿಶೇಷವೆಂದರೆ ಇವರ ಕಾರ್ಯಕ್ಕೆ ನಮ್ಮ ಸಮಾಜದ ಮತ್ತೊಬ್ಬರು ಅಕ್ಷರಶಃ ಕೈಜೋಡಿಸಿದ್ದಾರೆ. ಅಂದರೆ, ಈ ಪ್ಲಾಸ್ಮಾದಾನ ಜಾಗೃತಿ ಗೀತೆಯ ಸಾಹಿತ್ಯವನ್ನು ಡಾ.ಪರಪ್ಪ ಸಜ್ಜನ್ ಅವರು ರಚಿಸಿದ್ದಾರೆ.
ಇವರ ಪ್ರಯತ್ನಕ್ಕೆ ಸೈಬರಾಬಾದ್ ಸಂಚಾರ ವಿಭಾಗದ ಡಿಸಿಪಿ ಎಸ್.ಎಂ.ವಿಜಯಕುಮಾರ್, ಅಪರಾಧ ವಿಭಾಗದ ಡಿಸಿಪಿ ರೋಹಿಣಿ ಪ್ರಿಯದರ್ಶಿನಿ ಕೂಡ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ಕರ್ನಾಟಕದ ಜನತೆಗಾಗಿ ತೆಲಂಗಾಣ ಪೊಲೀಸ್ ಇಲಾಖೆಯ ಈ ಪ್ರಯತ್ನಕ್ಕೆ ಕರ್ನಾಟಕ ಪೊಲೀಸ್ ಇಲಾಖೆ ಕೂಡ ಕೈಜೋಡಿಸಿದೆ.
ಹೈದರಾಬಾದ್ ಮಲ್ಲರೆಡ್ಡಿ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ.ಪರಪ್ಪ ಸಜ್ಜನ್ ಅವರು ಪ್ಲಾಸ್ಮಾದಾನದ ಮಹತ್ವ ಸಾರುವ ಸಾಲುಗಳನ್ನು ರಚಿಸಿದ್ದು, ಅದಕ್ಕೆ ಸಂಗೀತದ ವಿಷಯದಲ್ಲೂ ಭಾರಿ ಬಲವೇ ಸಿಕ್ಕಿದೆ. ಏಕೆಂದರೆ ‘ಬಾಹುಬಲಿ’ ಸಿನಿಮಾ ತಂಡದ ಎಂ.ಎಂ. ಕೀರವಾಣಿ ಹಾಗೂ ಶ್ರೀನಿಧಿ ತಿರುಮಲ ಅವರು ಡಾ.ಪರಪ್ಪ ಅವರ ಸಾಲುಗಳಿಗೆ ದನಿ ಆಗಿದ್ದಾರೆ. ಈ ಗೀತೆಗೆ ಶ್ರೀನಿಧಿ ತಿರುಮಲ ಅವರೇ ಸಂಗೀತ ಸಂಯೋಜಿಸಿದ್ದಾರೆ.