ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಶಿರಸಿಯ ಹುಲೇಕಲ್ನಲ್ಲಿರುವ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕುಂದಾಪುರ ಶ್ರೀವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥರ ಅಪ್ಪಣೆಯ ಮೇರೆಗೆ ಏಪ್ರಿಲ್ 1ರಂದು ಶ್ರೀವ್ಯಾಸತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವವು ನೆರವೇರಲಿದೆ.
ಶ್ರೀಮದ್ ವ್ಯಾಸರಾಜರ 480ನೇ ವರ್ಷದ ಆರಾಧನಾ ಮಹೋತ್ಸವ ಇದಾಗಿದ್ದು, ತಪೋನಿಧಿ ಶ್ರೀಮದ್ ವ್ಯಾಸರಾಜ ಗುರುಗಳ ಪ್ರಪ್ರಥಮ ಮೃತ್ತಿಕಾ ವೃಂದಾವನದ ಸನ್ನಿಧಿಯಲ್ಲಿ ಇದು ನಡೆಯಲಿದೆ. ಈ ಆರಾಧನಾ ಮಹೋತ್ಸವದಲ್ಲಿ ಶ್ರೀ ಲಕ್ಷ್ಮೀಂದ್ರ ತೀರ್ಥರು ಸಾನ್ನಿಧ್ಯ ವಹಿಸಿ ಭಕ್ತರನ್ನು ಅನುಗ್ರಹಿಸಲಿರುವರು. ಇದೇ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ, ಬಾಗಿಲು ಗಣಪತಿ ಹಾಗೂ ಸಾಕ್ಷಿ ಗಣಪತಿ ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆಗಳು ಜರುಗಲಿವೆ.
ಕ್ಷೇತ್ರ ಮಹಿಮೆ: ಶ್ರೀವ್ಯಾಸರಾಜರು 15ನೇ ಶತಮಾನದಲ್ಲಿ ಶ್ರೀಲಕ್ಷ್ಮೀನಾರಾಯಣ ದೇವರನ್ನು ಹುಲೇಕಲ್ನಲ್ಲಿ ಪ್ರತಿಷ್ಠಾಪಿಸಿ ಸಿದ್ಧಿಕ್ಷೇತ್ರವನ್ನಾಗಿ ಮಾಡಿದ್ದಾರೆ. ಸೋಂದಾ ಶ್ರೀವಾದಿರಾಜ ಮಠದ ಸಮೀಪದಲ್ಲಿರುವ ಶ್ರೀಬಾಗಿಲು ಗಣಪತಿ ದೇವರು ಶ್ರೀವ್ಯಾಸರಾಜರಿಗೆ ಪ್ರತ್ಯಕ್ಷವಾಗಿ ಅವರಿಂದ ನೈವೇದ್ಯ ಸ್ವೀಕರಿಸಿ ಭಕ್ತರಿಗೆ ವರದಾಯಕವಾಗಿ ನೆಲೆಸಿದ್ದಾನೆ. ಶ್ರೀವ್ಯಾಸರಾಜರ ಕಾಲದಲ್ಲಿ ಇಲ್ಲಿ ರಥೋತ್ಸವ, ತೆಪ್ಪೋತ್ಸವ ಹಾಗೂ ನಿತ್ಯ ಅನ್ನಸಂತರ್ಪಣೆ ನಡೆಯುತ್ತಿತ್ತು. ಶ್ರೀವ್ಯಾಸರಾಜರು ನಡೆದಾಡಿದ ಸ್ಥಳವಾದ ಈ ಕ್ಷೇತ್ರದಲ್ಲಿ ಅವರ ಪ್ರಥಮ ಮೃತ್ತಿಕಾ ಬೃಂದಾವನವಿದೆ.
ಆರಾಧನಾ ಮಹೋತ್ಸವಕ್ಕೆ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗುರುಗಳ-ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಹುಲೇಕಲ್ ಶ್ರೀವ್ಯಾಸರಾಜ ಸೇವಾ ಸಮಿತಿ ವಿನಂತಿಸಿಕೊಂಡಿದೆ. ಹೆಚ್ಚಿನ ಮಾಹಿತಿಗೆ 9845691362, 8277456018 ಸಂಪರ್ಕಿಸಬಹುದು.
ಸಂಬಂಧಿತ ಸುದ್ದಿ: ವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥರಿಂದ ಮುದ್ರಾಧಾರಣೆ, ಆಶೀರ್ವಚನ, ವರ್ಧಂತ್ಯುತ್ಸವ
ಸಂಬಂಧಿತ ಸುದ್ದಿ: ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ