ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಆಗಾಗ ಕರ್ನಾಟಕಕ್ಕೆ ಬಂದು ಹೋಗುತ್ತಿರುತ್ತಾರೆ. ಅವರು ಗಾಣಿಗ ಸಮಾಜದವರೂ ಸೇರಿದಂತೆ ಹಲವರಿಗೆ ಸಾಕಷ್ಟು ಪರಿಚಿತ ಮುಖ. ಆದರೆ ಇದೀಗ ಹೊರಗಿನವರಿಗೆ ಅಷ್ಟೇನೂ ಗೊತ್ತಿರದ ಮತ್ತೊಬ್ಬ ಸಹೋದರ ಕರ್ನಾಟಕಕ್ಕೆ ಆಗಮಿಸಿದ್ದು, ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿ ಮೂರ್ನಾಲ್ಕು ದಿನಗಳ ಕಾಲ ತಂಗಿದ್ದು, ಬುಧವಾರ ಗುಜರಾತಿಗೆ ವಾಪಸ್ ತೆರಳಿದ್ದಾರೆ.
ಗುಜರಾತಿನಲ್ಲಿರುವ ಸರ್ವೋದಯ ಸೇವಾ ಟ್ರಸ್ಟ್ ಅಧ್ಯಕ್ಷರಾಗಿರುವ ಸೋಮಭಾಯಿ ಮೋದಿ ಅವರನ್ನು ಕರಾವಳಿಯ ಖ್ಯಾತ ವೈದ್ಯರೊಬ್ಬರು ತಮ್ಮ ನೂತನ ಆಸ್ಪತ್ರೆಯ ಉದ್ಘಾಟನೆಗಾಗಿ ಕರೆಸಿದ್ದರು. ಹೀಗಾಗಿ ನ.20ರಂದು ಗುಜರಾತ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೋಮಭಾಯಿ ಮೋದಿ, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ನಂತರ ಕುದ್ರೋಳಿ ಬಳಿಯ ಗುಜರಾತ್ ಶಾಲೆಯನ್ನು ಭೋಜನ ಸ್ವೀಕರಿಸಿ ಉಡುಪಿಗೆ ತೆರಳಿದ್ದರು.
ಉಡುಪಿಯಲ್ಲಿ ನ. 21ರಂದು ಹಮ್ಮಿಕೊಳ್ಳಲಾಗಿದ್ದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್ನವರ ಆರ್ಥಾಪ್ಟಿಕ್ಸ್ ಕ್ಲಿನಿಕ್, ಲೋ ವಿಷನ್ ಏಡ್ಸ್ ಕ್ಲಿನಿಕ್, ಐ-ಟ್ರೇಸ್ ಮತ್ತು ಪೀಡಿಯಾಟ್ರಿಕ್ ಐ ಕ್ಲಿನಿಕ್ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಸಹೋದರ ಭಾಗಿಯಾಗಿದ್ದರು. ಆರ್ಥಾಪ್ಟಿಕ್ ಕ್ಲಿನಿಕ್ಅನ್ನು ಸೋಮಭಾಯಿ ಮೋದಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿಯ ನಿಕಟಪೂರ್ವ ರಾಜ್ಯ ಸಹ ವಕ್ತಾರ ಹಾಗೂ ಅಖಿಲ ಭಾರತ ಗಾಣಿಗ ಸಂಘದ ನಿರ್ದೇಶಕರೂ ಆಗಿರುವ ಮಹೇಶ್ ತುಪ್ಪೆಕಲ್ಲು ಮುಂತಾದವರು ಹಾಜರಿದ್ದರು.
ಉಡುಪಿ-ಮಂಗಳೂರಿನಲ್ಲಿ ಒಂದಷ್ಟು ಸ್ಥಳಗಳಿಗೆ ಭೇಟಿ ನೀಡಿರುವ ಸೋಮಭಾಯಿ, ಇದೇ ಸಂದರ್ಭದಲ್ಲಿ ಉಡುಪಿಯಲ್ಲಿ ಕಣ್ಣಿಗೆ ಸಂಬಂಧಿಸಿದಂತೆ ಸಣ್ಣಮಟ್ಟದ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ. ಬುಧವಾರ ಸಂಜೆ 4.30ರ ವಿಮಾನದಲ್ಲಿ ಅವರು ಗುಜರಾತಿಗೆ ತೆರಳಿದ್ದಾರೆ.
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..
ಸಂಬಂಧಿತ ಸುದ್ದಿ: ಗಾಣಿಗ ಸಮಾಜದಿಂದ ವಿಶ್ವಕ್ಕೇ ಬೆಳಕು: ಮೋದಿ
ಸಂಬಂಧಿತ ಸುದ್ದಿ: ಸಿಎಂ-ಪಿಎಂ ಗಾದಿಗೇರಿದ ಮೋದಿ; ಇಲ್ಲಿದೆ ಯಶೋಗಾಥೆಯ ಹಾದಿ…