ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದವರ ಕುಲದೇವರಾಗಿರುವ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನ . 27ರ ರವಿವಾರ ವಿಜೃಂಭಣೆಯಿಂದ ನೆರವೇರಿದ್ದು, ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಕೋಡಿ ಕೃಷ್ಣ ಗಾಣಿಗರಿಗೆ ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭವೂ ನಡೆಯಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಬಾರ್ಕೂರು ಇದರ ನೇತೃತ್ವದಲ್ಲಿ ಬೆಳಗಿನಿಂದ ತಡರಾತ್ರಿವರೆಗೂ ನಡೆದ ಈ ದೀಪೋತ್ಸವ ಸಮಾರಂಭ ಸಾಂಗವಾಗಿ ನೆರವೇರಿತು. ರವಿವಾರ ಬೆಳಗ್ಗೆ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮ ದೇವಳದ ತಂತ್ರಿಗಳಾದ ವೇದಮೂರ್ತಿ ವಿದ್ವಾನ್ ಶ್ರೀಕಾಂತ್ ಸಾಮಗರ ಮಾರ್ಗದರ್ಶನದಲ್ಲಿ ಸಂಘದ ಅಧ್ಯಕ್ಷರಾದ ವಾಸುದೇವ್ ಬೈಕಾಡಿ ದಂಪತಿಗಳ ಸಂಕಲ್ಪದೊಂದಿಗೆ ನೆರವೇರಿತು.
ಸಮಾಜಬಾಂಧವರಿಗೆ ಈ ದೀಪೋತ್ಸವದಲ್ಲಿ ವಿಶೇಷವಾಗಿ ಪಾಲ್ಗೊಳ್ಳಲು ತುಪ್ಪದ ದೀಪದ ಸೇವೆ ಅವಕಾಶ ಕಲ್ಪಿಸಲಾಗಿದ್ದು, ಸಮಾಜದ ನೂರಾರು ಭಕ್ತಾದಿಗಳು ತುಪ್ಪದ ದೀಪ ಬೆಳಗಿ ಕುಲದೇವರ ಕೃಪೆಗೆ ಪಾತ್ರರಾದರು. ದೂರದೂರಲ್ಲಿದ್ದು ಬರಲಾಗದ ಸಮಾಜ ಬಾಂಧವರು ಕಾಣಿಕೆ ಕಳಿಸಿ ಸೇವೆ ನೀಡಿದ್ದು, ಅವರ ಪರವಾಗಿ ದೇವಸ್ಥಾನದಲ್ಲಿ ತುಪ್ಪದ ದೀಪ ಬೆಳಗಲಾಗಿದೆ.
ಸಂಭ್ರಮದ ದೀಪೋತ್ಸವದ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ಸಾಧಕರನ್ನು ಸನ್ಮಾನಿಸುವ ಸಭಾ ಕಾರ್ಯಕ್ರಮವೂ ಇತ್ತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಕೋಡಿ ಕೃಷ್ಣ (ಕುಷ್ಟ) ಗಾಣಿಗ ಅವರಿಗೆ ಸಂಘದ ಸುವರ್ಣ ಮಹೋತ್ಸವ ಯಕ್ಷನಿಧಿಯಿಂದ ನೀಡಲಾಗುವ ಹಾರಾಡಿ ರಾಮ ಗಾಣಿಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಕೆ.ಗೋಪಾಲ್, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಾಲ್ತಾರು ಬಿ. ನಾಗರಾಜ ಗಾಣಿಗ, ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪ್ಪುಂದ ಶ್ರೀಧರ ಗಾಣಿಗ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶೇಖರ್ ಗಾಣಿಗ, ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದ ಯಶೋದಾ ರಾಘವೇಂದ್ರ ಗಾಣಿಗ, ಹಿರಿಯ ಸಮಾಜ ಸೇವಕ ಶ್ರೀನಿವಾಸ ರಾವ್ ಪ್ರಗತಿ ನಗರ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲೆಯ ವಿವಿಧ ಗಾಮ ಪಂಚಾಯತ್ಗಳಿಗೆ ಆಯ್ಕೆಯಾದ ಸದಸ್ಯರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ನಾಗವೇಣಿ ಪಂಡರಿನಾಥ ಬಿರ್ತಿ, ರೇಖಾ ತೆಂಕನಿಡಿಯೂರು, ನಟರಾಜ ಗಾಣಿಗ ಮಾಬುಕಳ, ಗಣೇಶ ಗಾಣಿಗ ಬಾರ್ಕೂರು, ದಿವಾಕರ ಗಾಣಿಗ ಆವರ್ಸೆ, ನಾಗರಾಜ ಗಾಣಿಗ ಬಸ್ರೂರು, ರವಿ ಗಾಣಿಗ ಕೆಂಚನೂರು, ಉಷಾ ಗಾಣಿಗ ಶಿರೂರು, ಸುಮಿತ್ರ ಗಾಣಿಗ ಉಪ್ಪುಂದ, ರಾಘವೇಂದ್ರ ಗಾಣಿಗ ಬವಳಾಡಿ, ಜಲಜಾಕ್ಷಿ ಗಾಣಿಗ ಹೆರಂಜಾಲು, ಸುಲೋಚನಾ ಗಾಣಿಗ ನಾವುಂದ, ಲೀಲಾವತಿ ಗಾಣಿಗ ಕನ್ಯಾನ, ಹರೀಶ್ ಗಾಣಿಗ ಕುಂಭಾಶಿ, ಲೋಲಾಕ್ಷಿ ಗಾಣಿಗ ಗುಜ್ಜಾಡಿ, ಸೀತಾರಾಮ್ ಗಾಣಿಗ ಗುಜ್ಜಾಡಿ, ಮಹಾಲಕ್ಷ್ಮೀ ಗಾಣಿಗ ಉಪ್ಪುಂದ, ಜಯಲಕ್ಷ್ಮೀ ಗಾಣಿಗ ನಾರ್ಕಳಿ, ಸುಮತಿ ಗಾಣಿಗ ಯಡಮೊಗೆ ಅವರನ್ನು ಸನ್ಮಾನಿಸಲಾಯಿತು.
ವಿಶೇಷ ಕೃತಜ್ಞತೆ: ಬಾರ್ಕೂರು ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿನ ದೀಪೋತ್ಸವಕ್ಕೆ ಹಲವಾರು ವರ್ಷಗಳಿಂದ ಅನ್ನಸಂತರ್ಪಣೆ ಸೇವೆ ಸಲ್ಲಿಸುತ್ತಿರುವವರು ಬೆಂಗಳೂರಿನ ಹಳ್ಳಿಮನೆ ಹೋಟೆಲ್ ಮಾಲೀಕರಾಗಿರುವ ನೀಲಾವರ ಸಂಜೀವ ರಾವ್. ಈ ಸಂದರ್ಭದಲ್ಲಿ ರತ್ನ-ಸಂಜೀವ ರಾವ್ ದಂಪತಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.
ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು ಇದರ ಗೌರವಾಧ್ಯಕ್ಷ, ಹೋಟೆಲ್ ಉದ್ಯಮಿಯೂ ಆಗಿರುವ ಬಿ.ಎಸ್. ಮಂಜುನಾಥ್, ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ, ಉತ್ತರಕನ್ನಡ ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ದಾಮೋದರ ಶೆಟ್ಟಿ, ಸಂಪರ್ಕ ಸುಧಾ ಪತ್ರಿಕೆಯ ಅಧ್ಯಕ್ಷ ಎಸ್.ಕೆ. ಪ್ರಾಣೇಶ್, ಶ್ರೀವೇಣುಗೋಪಾಲಕೃಷ್ಣ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಜಿ. ಚಲ್ಲೆಮಕ್ಕಿ, ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷ ಎಂ. ಗೋಪಾಲಕೃಷ್ಣ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಉದಯಕುಮಾರ್, ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ್ ಮುಂತಾದವರು ಉಪಸ್ಥಿತರಿದ್ದರು.
ಸಂಘಟನೆಯ ಖಜಾಂಚಿ ರಘುರಾಮ್ ಬೈಕಾಡಿ ಸ್ವಾಗತ ಕೋರಿದರು. ಕಾರ್ಯದರ್ಶಿ ರಾಜೇಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ರಾಮಕೃಷ್ಣ ಹಾರಾಡಿ, ಯೋಗೀಶ್ ಕೊಳಲಗಿರಿ ಸಾಧಕರನ್ನು ಪರಿಚಯಿಸಿದರು. ಉಪಾಧ್ಯಕ್ಷ ಸೂರ್ಯನಾರಾಯಣ ಗಾಣಿಗ ವಂದನಾರ್ಪಣೆ ಸಲ್ಲಿಸಿದರು.
ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ
ಸಂಬಂಧಿತ ಸುದ್ದಿ: ಚಿತ್ರಗಿ ಮಠದಲ್ಲಿ ವಿಜೃಂಭಣೆಯಿಂದ ನಡೆಯಿತು ಗಾಣಿಗ ಯುವ ಬಳಗದ ದೀಪೋತ್ಸವ
ಸಂಬಂಧಿತ ಸುದ್ದಿ: ತಿರುಪತಿ ವೆಂಕಟೇಶ್ವರನಾಗಿ ಕಂಗೊಳಿಸಿದ ಬಾರ್ಕೂರು ವೇಣುಗೋಪಾಲಕೃಷ್ಣ