ಬೆಂಗಳೂರು: ರಾಜಕೀಯಕ್ಕೆ ಬಂದವರು ನಿವೃತ್ತರಾಗಲು ಬಯಸದಿರುವುದು ಸರ್ವೇಸಾಮಾನ್ಯ. ಹಾಗೆ ರಾಜಕೀಯಕ್ಕೆ ಬಂದವರು ಕೊನೆಯವರೆಗೂ ಸಕ್ರಿಯ ರಾಜಕಾರಣದಲ್ಲಿ ಇರಲಾಗದಿದ್ದರೂ ರಾಜಕೀಯದಲ್ಲೇ ಇರುವುದು ಸಹಜ. ಆದರೆ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ರಾಜಕೀಯದಿಂದ ಹೊರಬಂದಿದ್ದಾರೆ. ಅಷ್ಟೇ ಆಗಿದ್ದರೆ ಅದರಲ್ಲೇನೂ ಅಂಥ ವಿಶೇಷವಿಲ್ಲ ಎನ್ನಬಹುದು. ಆದರೆ ಅವರು ರಾಜಕೀಯದಿಂದ ಹೊರಬರುವುದಷ್ಟೇ ಅಲ್ಲದೆ ಮತ್ತೊಂದು ಕ್ಷೇತ್ರಕ್ಕೆ ಧುಮುಕಿದ್ದಾರೆ.
ಹೌದು.. ಮಾಜಿ ಸಚಿವ, ವಿಧಾನಪರಿಷತ್ ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ.ಜೆ. ಪುಟ್ಟಸ್ವಾಮಿ ಸದ್ಯದಲ್ಲೇ ಸ್ವಾಮೀಜಿ ಆಗಿ ಪೀಠಾರೋಹಣ ಮಾಡಲಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ದಾಸನಪುರ ಹೋಬಳಿಯ ನಗರೂರು ಗ್ರಾಮದ ಬಡಾವಣೆಯಲ್ಲಿರುವ, ಅವರೇ ಸ್ಥಾಪಿಸಿರುವ ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್ (ರಿ.) ಅಧೀನದ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಪ್ರಥಮ ಪೀಠಾಧಿಪತಿಯಾಗಿ ಬಿ.ಜೆ. ಪುಟ್ಟಸ್ವಾಮಿ ಅವರು ಮೇ 15ರಂದು ಪೀಠಾರೋಹಣ ಮಾಡಲಿದ್ದಾರೆ.
ಅಂದು ಬೆಳಗ್ಗೆ 11.50ರಿಂದ 12.15ರ ಅವಧಿಯಲ್ಲಿ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದ್ದು, ಆ ಬಳಿಕ ಅವರು ಶ್ರೀಪೂರ್ಣಾನಂದಪುರಿ ಸ್ವಾಮೀಜಿಯಾಗಿ ಕರೆಯಲ್ಪಡಲಿದ್ದು, ಅದೇ ಹೆಸರಿನಲ್ಲಿ ಮುಂದೆ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಶ್ರೀಕೈಲಾಸ ಆಶ್ರಮದ ಶ್ರೀ ತಿರುಚ್ಚಿ ಮಹಾಸ್ವಾಮಿ, ಶ್ರೀಜಯೇಂದ್ರಪುರಿ ಸ್ವಾಮಿ ಸೇರಿ ಅನೇಕ ಪೀಠಾಧಿಪತಿಗಳು, ಸಾಧು-ಸಂತರು, ಧಾರ್ಮಿಕ ಮುಖಂಡರು ಮತ್ತು ವಿವಿಧ ಪಕ್ಷಗಳ ರಾಜಕೀಯ ನಾಯಕ ಸಮ್ಮುಖದಲ್ಲಿ ಈ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.
ಸ್ವಾಮೀಜಿಯಾಗಿ ಪೀಠಾರೋಹಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆ.ಎಸ್.ಈಶ್ವರಪ್ಪ ಸೇರಿ ಹಲವಾರು ಗಣ್ಯರನ್ನು ಭೇಟಿಯಾಗಿ ಪಟ್ಟಾಭಿಷೇಕ ಮಹೋತ್ಸವಕ್ಕೆ ಆಹ್ವಾನಿಸಿದರು.
ನಮ್ಮ ಗಾಣಿಗ ಜನಾಂಗ ಅತ್ಯಂತ ಹಿಂದುಳಿದಿದ್ದು, ಅದರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ. ಅಲ್ಲದೆ ಗಾಣಿಗ ಜನಾಂಗಕ್ಕೆ ದಾರಿದೀಪವಾಗಬೇಕು, ಜನಾಂಗದ ಏಳ್ಗೆಗೆ ಶ್ರಮಿಸಬೇಕೆಂಬ ಸದುದ್ದೇಶದಿಂದ ನಾನು ಪೀಠಾರೋಹಣ ಮಾಡುತ್ತಿದ್ದೇನೆ. ಸಮುದಾಯದ ಬಡವರ ಏಳ್ಗೆಯೇ ನನ್ನ ಗುರಿ.
| ಬಿ.ಜೆ. ಪುಟ್ಟಸ್ವಾಮಿ, ಮಾಜಿ ಸಚಿವರು.
ಸಂಬಂಧಿತ ಸುದ್ದಿ: ಚಾಮರಾಜಪೇಟೆಗಾಗಿ ಸಂಸದರು-ಶಾಸಕರಿಂದ ಮಾಸಿಕ ಸಭೆ: ಪಿ.ಸಿ.ಮೋಹನ್ ಭರವಸೆ
ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ
ಸಂಬಂಧಿತ ಸುದ್ದಿ: ಡಿವೈಎಸ್ಪಿ ಶಿವಕುಮಾರ್ಗೆ ಮುಖ್ಯಮಂತ್ರಿ ಪದಕ ಪ್ರದಾನ