ಬೆಂಗಳೂರು: ರಾಜ್ಯಮಟ್ಟದಲ್ಲಿ ಗಾಣಿಗ ಸಮಾಜದ ಬೃಹತ್ ಸಮಾವೇಶ ನಡೆಸುವ ಸಲುವಾಗಿ ಇದೇ ಅಕ್ಟೋಬರ್ 16ರಂದು ರಾಜಧಾನಿ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು, ಸಮುದಾಯದ ಹಿರಿಯರು-ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಬೇಕು ಎಂದು ಆಯೋಜಕರು ಕೋರಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಗಾಣಿಗ ಸಮಾಜದ ಬೃಹತ್ ಸಮಾವೇಶ ನಡೆಸಲು, ರಾಜ್ಯಮಟ್ಟದಲ್ಲಿ ಗಾಣಜ್ಯೋತಿ ರಥಯಾತ್ರೆ ನಡೆಸಲು, ಆ ಮೂಲಕ ಗಾಣಿಗ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹಿಸುವುದು ಮುಂತಾದ ಉದ್ದೇಶಗಳಿಗೆ ಸಂಬಂಧಿಸಿದಂತೆ ಈ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.
ಮೇಲ್ಕಂಡ ವಿಷಯದ ಕುರಿತಾಗಿ ಮಾತ್ರ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲು ಅವಕಾಶವಿರುತ್ತದೆ, ಇತರ ಯಾವುದೇ ಹಾಗೂ ವೈಯಕ್ತಿಕ ವಿಚಾರಗಳಿಗೆ ಚರ್ಚಿಸಲು ಅವಕಾಶವಿರುವುದಿಲ್ಲ ಎಂಬುದಾಗಿ ಆಯೋಜಕರು ಹೇಳಿದ್ದಾರೆ.
ಅ. 16ರಂದು ಬೆಳಗ್ಗೆ 10.30 ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಈ ಪೂರ್ವಭಾವಿ ಸಭೆ ನಡೆಯಲಿದೆ. ಈ ಸಭೆಗೆ ಗಾಣಿಗ ಸಮಾಜದ ಗುರುಗಳು, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಗಾಣಿಗ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹೋರಾಟಗಾರರು, ಶಾಸಕರು, ರಾಜಕಾರಣಿಗಳು, ಹಿರಿಯರು ಭಾಗವಹಿಸಿ ಅಭಿಪ್ರಾಯ ತಿಳಿಸುವಂತೆ ಕೋರಲಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾಗಿರುವ ಯತೀಶ್ ಗಾಣಿಗ ತಿಳಿಸಿದ್ದಾರೆ.
ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯಾದ್ರೆ ಸಿಗುವ ಸೌಲಭ್ಯಗಳು
- ಗಂಗ ಕಲ್ಯಾಣ ಯೋಜನೆ.
- ಸ್ವ-ಸಹಾಯ ಸಂಘಗಳ ಸಾಲ ಸೌಲಭ್ಯ
- ಯುವ ಜನರಿಗೆ ಕೌಶಲ್ಯ ಅಭಿವೃದ್ಧಿಯಾಗಲು ಸಾಲ ಸೌಲಭ್ಯ.
- ಉದ್ಯೋಗ ಮುಖಿಯನ್ನಾಗಿಸಲು ಸಾಲ ಸೌಲಭ್ಯ
- ಶೈಕ್ಷಣಿಕ ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ/ಫೆಲೋಶಿಪ್ ಸೌಲಭ್ಯ.
- ವಿದ್ಯಾರ್ಥಿಗಳಿಗೆ ಆಶ್ರಯ ಶ್ರೀ ಯೋಜನೆ ವಿದೇಶ ವಿದ್ಯಾವಿಕಾಸ
- ವೈಯಕ್ತಿಕ ಸಾಲ, ಆಟೋ-ಕಾರು ಚಾಲಕರಿಗೆ ಸ್ವಂತ ಉದ್ಯೋಗಕ್ಕಾಗಿ ವಾಹನ ಸಾಲ ಸೌಲಭ್ಯ.
- ಗಾಣಿಗ ನಿಗಮ-ಮಂಡಳಿ ಸ್ಥಾಪನೆಯಾದರೆ ಈ ರೀತಿ ಇನ್ನೂ ಹತ್ತು ಹಲವು ಯೋಜನೆಗಳಡಿ ಗಾಣಿಗ ಸಮಾಜಕ್ಕೆ ಸೌಲಭ್ಯಗಳು ದೊರೆಯುತ್ತವೆ.
ಸಂಬಂಧಿತ ಸುದ್ದಿ: ರಾಜ್ಯೋತ್ಸವ ಕೊಡುಗೆ: ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಿಲ್ಲಿ ಕಂಪ್ಯೂಟರ್ ಕೋರ್ಸ್ ಉಚಿತ
ಸಂಬಂಧಿತ ಸುದ್ದಿ: ಥಾಣೆ ನಿತ್ಯಾನಂದ ಸೇವಾ ಸಂಸ್ಥೆ ಅಧ್ಯಕ್ಷರಾಗಿ ಗೋಪಾಲಕೃಷ್ಣ ಗಾಣಿಗ ಪುನರಾಯ್ಕೆ
ಸಂಬಂಧಿತ ಸುದ್ದಿ: ಬೆಂಗಳೂರು ಜಿಲ್ಲಾ ಟೀಮ್ ಚಾಂಪಿಯನ್ಷಿಪ್ನಲ್ಲಿ ಬಾಲರ್ಕ ರನ್ನರ್ ಅಪ್