ಬೆಂಗಳೂರು: ಗಾಣಿಗ ಸಮುದಾಯಕ್ಕೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಮುಂದಿಡುವ, ಬಹುಕಾಲದ ಬೇಡಿಕೆಗಳ ಈಡೇರಿಕೆ ಸಂಬಂಧ ಹಕ್ಕೊತ್ತಾಯ ಸಲ್ಲಿಸುವ ಸಲುವಾಗಿ 2023ರ ಜನವರಿಯಲ್ಲಿ ಗಾಣಿಗ ಸಮುದಾಯದ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, ಈ ಕುರಿತ ಪೂರ್ವಭಾವಿ ಸಮಾವೇಶ ಇತ್ತೀಚೆಗೆ ನಡೆಯಿತು.
ಗಾಣಿಗ ಸಮುದಾಯದ ಪೀಠಾಧ್ಯಕ್ಷರಾದ ಡಾ. ಶ್ರೀಜಯಬಸವಕುಮಾರ ಸ್ವಾಮೀಜಿ, ಕೊಲ್ಹಾರದ ಶ್ರೀಕಲ್ಲಿನಾಥ ಸ್ವಾಮೀಜಿ, ಸಮಾಜದ ಮುಖಂಡರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಲೋಣಿ ಮತ್ತಿತರರ ನೇತೃತ್ವದಲ್ಲಿ ನ. 15ರಂದು ಬೆಂಗಳೂರಿನ ಕೆಪಿಟಿಸಿಎಲ್ ಭವನದಲ್ಲಿ ಈ ಪೂರ್ವಭಾವಿ ಸಭೆ ನಡೆಯಿತು.
ಗಾಣಿಗ ಸಮಾಜಕ್ಕೆ ಸಂಬಂಧಿಸಿದಂತೆ 31 ಜಿಲ್ಲೆಗಳ ಅಧ್ಯಕ್ಷರು, ಸಮಾಜದ ವಿವಿಧ ಸಂಘ-ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಈ ಪೂರ್ವಭಾವಿ ಸಭೆಯಲ್ಲಿ ಬೃಹತ್ ಸಮಾವೇಶದ ಸಿದ್ಧತೆ ಕುರಿತು ಚರ್ಚಿಸಿ, ರೂಪುರೇಷೆಗಳ ಕುರಿತು ಮಾತುಕತೆ ನಡೆಸಲಾಯಿತು.
ಕೋಲಾರ, ಮಂಡ್ಯ ಮೈಸೂರು, ಮಂಗಳೂರು, ಶಿವಮೊಗ್ಗ ಒಳಗೊಂಡಂತೆ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಭಾಗದ ಎಲ್ಲ ಗಾಣಿಗರು ಒಗ್ಗೂಡಿ ಸಮಾಜದ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ 2023ರ ಜನವರಿಯಲ್ಲಿ ಈ ಬೃಹತ್ ಸಮಾವೇಶ ನೆರವೇರಿಸುವುದು ಎಂದು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಮಾವೇಶದಲ್ಲಿ ಸಲ್ಲಿಸಲಿರುವ ಬೇಡಿಕೆಗಳು
1. ಉತ್ತರ ಕರ್ನಾಟಕದ ಗಾಣಿಗರು ಮತ್ತು ಮಂಗಳೂರು, ಮೈಸೂರು, ಕೋಲಾರ, ಕರಾವಳಿಯ ಭಾಗದ ಗಾಣಿಗರ ಆಚಾರ-ವಿಚಾರ, ಆಹಾರ ಪದ್ಧತಿಗಳು ಬೇರೆ ಇರಬಹುದು. ಆದರೆ ಗಾಣಿಗ ಸಮುದಾಯದ ಉಪ ಪಂಗಡಗಳ ಎಲ್ಲಾ ಗಾಣಿಗರು ಒಂದೇ ಎಂಬ ಒಗ್ಗಟ್ಟಿನ ಸಂದೇಶ ಸಾರುವ ಮೂಲಕ ಸರ್ಕಾರಗಳಿಗೆ ಸಮಾಜದ ಶಕ್ತಿ ಪ್ರದರ್ಶನ ಮಾಡಿ ಸರ್ಕಾರದ ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಸಮಾಜ ಗಣತಿಯ ಅಂಕಿ-ಅಂಶ ನೀಡುವುದು.
2. ಗಾಣಿಗ ಸಮಾಜಕ್ಕೆ ಸರ್ಕಾರದ ವತಿಯಿಂದ ವಿಶೇಷ ಅನುದಾನ ಕೊಡಬೇಕೆಂದು ಆಗ್ರಹ ಸಲ್ಲಿಸುವುದು.
3. ಗಾಣಿಗ ಅಭಿವೃದ್ಧಿ ನಿಗಮ/ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸುವುದು.
ಪ್ರಮುಖವಾಗಿ ಈ ಮೂರು ಬೇಡಿಕೆಗಳು ಈಡೇರಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ನಮ್ಮ ಸಮಾಜದ ಜನಸಂಖ್ಯೆ ಹಾಗೂ ನಮ್ಮ ಶಕ್ತಿಯನ್ನು ಸರ್ಕಾರದ ಗಮನಕ್ಕೆ ತರುವುದು ಅತಿಮುಖ್ಯವಾಗಿದೆ. ರಾಜ್ಯಮಟ್ಟದ ರಾಜಕೀಯ ನಾಯಕರು ನಮ್ಮ ಸಮಾಜವನ್ನು ಕನಿಷ್ಠವಾಗಿ ನೋಡುವ ಭಾವನೆಯನ್ನು ಕೊನೆಗಾಣಿಸಬೇಕು. ಈ ಎಲ್ಲ ಉದ್ದೇಶಗಳನ್ನು ಒಳಗೊಂಡಿರುವ ಈ ಸಮಾವೇಶವನ್ನು ಬೆಂಗಳೂರಿನಲ್ಲೇ ನಡೆಸಲಿದ್ದು, ಸಮಾಜದ 2ರಿಂದ 3 ಲಕ್ಷ ಜನರನ್ನು ಸೇರಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಮುಂದಿನ ವಿಧಾನಸಭಾ ಚುನಾವಣೆ ಒಳಗಾಗಿ ನಡೆಯುವ ಈ ಸಮಾವೇಶ ಎಲ್ಲ ರಾಜಕೀಯ ಪಕ್ಷಗಳಿಗೂ ಗಾಣಿಗರ ಜನಶಕ್ತಿಯ ದರ್ಶನ ಮಾಡಿಸುವಂತಿರಬೇಕು ಎಂಬ ನಿಟ್ಟಿನಲ್ಲಿ 31 ಜಿಲ್ಲೆಗಳ ಗಾಣಿಗ ಸಮುದಾಯದ ಸಂಘಟನೆಗಳ ಅಧ್ಯಕ್ಷರುಗಳು, ಮುಖಂಡರು ಸೇರಿ ಬೆಂಗಳೂರಿನ ಅರಮನೆ ಮೈದಾನದಲ್ಲೇ ಈ ಸಮಾವೇಶ ನಡೆಸುವ ನಿರ್ಧಾರ ಕೈಗೊಂಡಿದ್ದು, ಇದಕ್ಕೆ 8ರಿಂದ 10 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ.
ಗಾಣಿಗ ಸಮಾಜದ ರಾಜ್ಯಮಟ್ಟದ ನಾಯಕರು, ಹಾಲಿ-ಮಾಜಿ ಜನಪ್ರತಿನಿಧಿಗಳು, ಸ್ವಾಮೀಜಿಗಳು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡಂತೆ ಈ ಸಮಾವೇಶ ನಡೆಸಲಿದ್ದು, ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದು ರಾಜ್ಯ ಗಾಣಿಗರ ಬೃಹತ್ ಸಮಾವೇಶದ ಸ್ವಾಗತ ಸಮಿತಿಯು ತಿಳಿಸಿದೆ.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ
ಸಂಬಂಧಿತ ಸುದ್ದಿ: ಯಾರಿವರು.. ಎಲ್ಲಿದ್ದರು ಇಷ್ಟು ದಿನ?; ಇದು ‘ಕ್ಷಯ’ ಹುಟ್ಟುಹಾಕಿದ ಪ್ರಶ್ನೆ!